ಗಾಂಧಿಗ್ರಾಮದ ಸ್ನೇಹಿತ ಪ್ರಕಾಶ್ ಎರಡು ವರ್ಷಗಳ ಹಿಂದೆ ಹೇಳಿದ್ದ ವಿಷಯ ತನ್ನ ಮಗ ತೇಜುವಿನ ಗಣೇಶನ ಭಕ್ತಿಯ ಬಗ್ಗೆ. ಮನೆಯಲ್ಲಿ ಅದ್ಧೂರಿಯಾಗಿ ಗಣೇಶನನ್ನು ಕೂಡಿಸಿದ ನಂತರ ರಸ್ತೆಯಲ್ಲೂ ಗಣೇಶ ಕೂಡಿಸುವುದು. ಬಾಲ್ಯದಲ್ಲಿ ಆಗಾಗ ಗಣೇಶ ಕೊಂಡುಕೊಂಡು ನದಿಗಳಲ್ಲಿ ಯಾವುದೇ ಊರಿನಲ್ಲಿದ್ದರೂ ಗಣೇಶನನ್ನು ಖರೀದಿಸಿ ನೀರಿಗೆ ಬಿಡುತ್ತಿದ್ದುದ್ದು ಅಂತೆಯೇ ಅಮೇರಿಕಾದಲ್ಲಿ ಉನ್ನತ ವ್ಯಾಸಂಗ ಮಾಡುತ್ತಿರುವಾಗಲೂ ಬೆಂಗಳೂರಿನ ಮನೆಯ ರಸ್ತೆಯಲ್ಲಿ ಗಣೇಶ ಕೂಡಿಸಲು ಎರಡು ಲಕ್ಷ ರೂಪಾಯಿ ಖರ್ಚು ಮಾಡಿಕೊಂಡು ಬಂದು ಹೋಗಿದ್ದು ಕೇಳಿದಾಗ ವಿಶೇಷವೆನಿಸಿತು.
ಮಲ್ಲೇಶ್ವರದ ರಸ್ತೆಯಲ್ಲಿ ಹಗಲು ದೇವಸ್ಥಾನದ ಗಣಪತಿಯ ಮೆರವಣಿಗೆಯಿದ್ದರೆ ರಾತ್ರಿಗೆ ರಸ್ತೆಯಲ್ಲಿಯೇ ಕೂಡಿಸಿರುವ ಗಣೇಶನ ವಿಶೇಷ ದೀಪಾಲಂಕೃತ ಮೆರವಣಿಗೆ ಮತ್ತು ಮೆರವಣಿಗೆಯ ಮುಂದೆ ಕುಣಿಯುತ್ತಿದ್ದ ಜನರನ್ನು ನೋಡಿದಾಗ ನೆನಪಾಗುವುದು ನನ್ನ ಬಾಲ್ಯ.ಶ್ರೀ.ವಿನಾಯಕ ಸೇವಾ ಮಂಡಳಿ ಅಂತ ರಸ್ತೆಯಲ್ಲಿ ಗಣೇಶ ಕೂಡಿಸಿ ರಸ್ತೆಯಲ್ಲಿ ಸಿನಿಮಾ ತೋರಿಸಿ ಸಂಗೀತ ರಸಸಂಜೆ ಏರ್ಪಡಿಸಿ ಹೂವಿನ ಅಲಂಕೃತ ಮೆರವಣಿಗೆಯಲ್ಲಿ ನಮ್ಮ ಬಡಾವಣೆಯ ಪ್ರಮುಖ ರಸ್ತೆಗಳಲ್ಲಿ ಸಾಗುವಾಗ ನಾನು ಮಾಡಿದ್ದೂ ಇದೇ ಕೆಲಸ. ಮೈ ಬೆವರುವಂತೆ ಒಂದೇ ಸಮ ಡ್ಯಾನ್ಸ್.
ಇಂದಿಗೂ ಆಫೀಸಿನಲ್ಲಿ ಅಥವಾ ಯಾವುದೋ ಮನೋರಂಜನಾ ಕಾರ್ಯಕ್ರಮದಲ್ಲಿ ದಿಢೀರ್ ಅಂತ ಡ್ಯಾನ್ಸ್ ಮಾಡಬೇಕೆಂದರೆ ಯಾವುದೇ ಮುಲಾಜಿಲ್ಲದೆ ಡ್ಯಾನ್ಸ್ ಮಾಡಲು ನನಗೆ ಇಂದಿಗೂ ಸಾಧ್ಯ. ಇದಕ್ಕೆ ಮೂಲವೇ ಆ ಬಾಲ್ಯದಲ್ಲಿ ರಸ್ತೆಯಲ್ಲಿ ಕುಣಿದ ಅನುಭವ. ನಿಜಕ್ಕೂ ಸುಂದರವಾಗಿತ್ತು ನಮ್ಮ ಬಾಲ್ಯ. ಮೆರವಣಿಗೆಯ ನೆನಪಿನಲ್ಲಿ ನಾಲ್ಕು ದಶಕಗಳ ಹಿಂದಕ್ಕೆ ಹೋಗಿದ್ದೆ.
-C.N. RAMESH




0 Comments