Ticker

6/recent/ticker-posts

Ad Code

Responsive Advertisement

SURYA ELEGANCE : V. SOMANNA : "ಸೂರ್ಯ ಎಲಿಗೆನ್ಸ್" ಬಹು ಮಹಡಿ ಕಟ್ಟಡ ಲೋಕಾರ್ಪಣೆ: ವಿ ಸೋಮಣ್ಣ

ಬೆಂಗಳೂರು   ಸೆ. 26.( ಕರ್ನಾಟಕ ವಾರ್ತೆ)  ಪ್ರಧಾನಮಂತ್ರಿಗಳ ಅವಾಸ್ ಯೋಜನೆಯಡಿ ಎಲ್ಲರಿಗೂ ಸೂರು  ಕಲ್ಪಿಸುವಲ್ಲಿ  ಬೆಂಗಳೂರು ನಗರ ಜಿಲ್ಲೆ ಮೊದಲು ಸ್ಥಾನದಲ್ಲಿದೆ ಎಂದು ವಸತಿ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವರು ಹಾಗೂ ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷ ವಿ . ಸೋಮಣ್ಣ ಹೇಳಿದರು.


ಕರ್ನಾಟಕ ಗೃಹ ಮಂಡಳಿಯಿಂದ ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲ್ಲೂಕಿನ ಚಂದಪುರ ಸೂರ್ಯನಗರದಲ್ಲಿ 1ನೇ ಹಂತದ  ನೂತನವಾಗಿ ನಿರ್ಮಿಸಿಲಾಗಿರುವ  ಸೂರ್ಯ ಎಲಿಗೆನ್ಸ್ ಬಹುಮಹಡಿ ವಸತಿ ಸಮುಚ್ಚಯವನ್ನು ಲೋಕಾರ್ಪಣೆ ಮಾಡಿ ಹತ್ತು ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಿಸಿದರು‌. ನಂತರ ಮಾತನಾಡಿ  ಬೆಂಗಳೂರಿನಲ್ಲಿ ಪ್ರತಿಯೊಬ್ಬರಿಗೂ ಸ್ವಂತ ಮನೆ ಹೊಂದಬೇಕು ಎನ್ನುವ  ಮಹದಾಸೆಗೆ ಸೂರ್ಯನಗರ ಯೋಜನೆಯನ್ನು ಜಾರಿಗೊಳಿಸಲಾಗಿದ್ದು, ಈಗಾಗಲೇ  ಫ್ಯಾಟ್‌ಗಳ ಹಂಚಿಕೆಗೆ ಅರ್ಜಿ ಕರೆಯಲಾಗಿದ್ದು,  ಶೀಘ್ರವೇ ಮನೆಗಳ ಹಂಚಿಕೆಯಾಗಲಿದೆ. ಉತ್ತಮ ಗುಣಮಟ್ಟದ ಫ್ಲಾಟ್  ನಿರ್ಮಾಣದ ಸಂಕಲ್ಪಕ್ಕೆ ಮಂಡಳಿ  ಬದ್ಧವಾಗಿದೆ ಎಂದು ಅವರು  ಹೇಳಿದರು‌.

ಮಧ್ಯಮ ಮತ್ತು ಕೆಳಮಧ್ಯಮ ವರ್ಗದ ಲಕ್ಷಾಂತರ ಮಂದಿ ಸ್ವಂತ ಸೂರು ಇಲ್ಲದೆ ನಿವೇಶನ ಹೊಂದುವ ಬಯಕೆಯನ್ನು ಹೊಂದಿರುತ್ತಾರೆ. ಎಲ್ಲರ ಆಶೋತ್ತರಗಳನ್ನು ಈಡೇರಿಸಲು ವಸತಿ ಇಲಾಖೆಯ ಏಷ್ಯಾದ ಅತಿದೊಡ್ಡ ಯೋಜನೆಯನ್ನು ಕೈಗೆತ್ತಿಕೊಂಡಿದೆ.  ಬೆಂಗಳೂರಿನ ಚಂದಾಪುರದಲ್ಲಿ  6 ಎಕರೆ 14 ಗುಂಟೆ ವ್ಯಾಪ್ತಿಯಲ್ಲಿ  77.14   ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಸೂರ್ಯನಗರ ಹಲವು ವಿಶೇಷತೆಗಳನ್ನು ಹೊಂದಿದ್ದು ಉತ್ತಮ  ಗುಣಮಟ್ಟದ ರಸ್ತೆ ಸೌಲಭ್ಯ,  ಒಳಾಂಗಣ ಕ್ರೀಡಾಂಗಣ ಮತ್ತು ಉದ್ಯಾನವನ ನಿರ್ಮಿಸಲಾಗಿದೆ.  ಒಳಚರಂಡಿ  ಹಾಗೂ ಕಾವೇರಿ ನೀರು ಸರಬರಾಜು, ಮಳೆ ನೀರು
ಕೊಯ್ಲು ವ್ಯವಸ್ಥೆಯನ್ನು ಮಾಡಲಾಗಿದೆ.  ಈ ಸಮುಚ್ಚಯದಲ್ಲಿ  2 ಮತ್ತು 3 ಬಿ.ಎಚ್.ಕೆ ಸೇರಿ ಒಟ್ಟು 384 ಪ್ಲ್ಯಾಟ್ ಲಭ್ಯವಿವೆ  ಎಂದು ಅವರು ಹೇಳಿದರು.

 ಮುಂದಿನ ದಿನಗಳಲ್ಲಿ ಈ ಭಾಗಕ್ಕೆ ಕಾವೇರಿ ಕುಡಿಯುವ ನೀರು ಮೂರನೇ ಹಂತದಿಂದ 5ಎಮ್ ಎಲ್ ಡಿಯನ್ನು ಒದಗಿಸುವ ಯೋಜನೆ ಸರ್ಕಾರದ ಮುಂದಿದೆ‌, ಹಾಗೂ ಅಂದಾಜು 25 ಎಕರೆ ಜಮೀನನ್ನು ಗುರುತಿಸಿ ಅಂತರಾಷ್ಟ್ರೀಯ ಮಟ್ಟದ ಕ್ರೀಡಾಂಗಣ ನಿರ್ಮಾಣ ಮಾಡಲು ಮುಖ್ಯ ಮಂತ್ರಿಗಳೊಂದಿಗೆ ಸಮಾಲೋಚಿಸಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಸಂಸದರಾದ  ಡಿ.ಕೆ.ಸುರೇಶ್ ಅವರು ಮಾತನಾಡಿ  ಸ್ಥಳೀಯ ನಿವಾಸಿಗಳಿಗೆ ಸಮುಚ್ಚಯ ಖರೀದಿಯಲ್ಲಿ ಮೀಸಲಾತಿ ಹಾಗು   ವಿನಾಯಿತಿ  ನೀಡಬೇಕು ಎಂದು ಒತ್ತಾಯಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆನೇಕಲ್ ವಿಧಾನ ಸಭಾ ಕ್ಷೇತ್ರದ ಶಾಸಕ ಬಿ. ಶಿವಣ್ಣ ವಹಿಸಿದರು‌. ಕಾರ್ಯಕ್ರಮದಲ್ಲಿ ಮಾನ್ಯ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ಕೇಂದ್ರ ಸಚಿವರು ಎ.ನಾರಾಯಣಸ್ವಾಮಿ,  ವಿಧಾನ ಪರಿಷತ್ ಶಾಸಕರಾದ ಪುಟ್ಟಣ್ಣ, ಹಾಗೂ ಅ ದೇವೆಗೌಡ  ಆನೇಕಲ್ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ.ಜಯಣ್ಣ,  ವಸತಿ ಇಲಾಖೆ ಕಾರ್ಯದರ್ಶಿ ಮನೋಜ್ ಕುಮಾರ ಮೀನಾ, ಕರ್ನಾಟಕ ಗೃಹ ಮಂಡಳಿ ಆಯುಕ್ತರಾದ ಡಿ.ಎಸ್ ರಮೇಶ್,  ಬೆಂಗಳೂರು ನಗರ ಜಿಲ್ಲಾಧಿಕಾರಿ ಜೆ.ಮಂಜುನಾಥ್ ಸೇರಿದಂತೆ ಸ್ಥಳೀಯ ಗ್ರಾಮ ಪಂಚಾಯತಿ ಅಧ್ಯಕ್ಷರುಗಳು, ಅಧಿಕಾರಿಗಳು ಉಪಸ್ಥಿತರಿದ್ದರು .

Post a Comment

0 Comments

Ad Code

Responsive Advertisement