ನನ್ನ ಶೇಷಾದ್ರಿಪುರಂ ಕಾಲೇಜಿನ ಸ್ನೇಹಿತರ ಪೈಕಿ ಪಿ ರಾಜೇಶ್ ಒಬ್ಬರು.ಒಬ್ಬ ಸಂಭಾವಿತ ಹಾಗೂ ಸರಳ ಮನಸ್ಸಿನ ಸ್ನೇಹಿತ.ನನಗೆ ಬಿ ಕಾಂ ಓದುವಾಗ ಕಂಬೈನ್ಡ್ ಸ್ಟಡೀಸ್ ಮೂಲಕ ಸ್ಟ್ಯಾಟಿಸ್ಟಿಕ್ಸ್ ಹೇಳಿಕೊಟ್ಟವರು.ಇವರ ತಮ್ಮ.
ಪಿ ರಮೇಶ್ ನಮ್ಮ ರಾಘವೇಂದ್ರ ಪ್ರೌಢ ಶಾಲೆಯಲ್ಲಿ ನನಗಿಂತ ಒಂದು ವರ್ಷದ ಕಿರಿಯ.ನನಗೆ ಕೊಬ್ಬರಿ ಎಣ್ಣೆ ನೋಡಿದಾಗ ತಪ್ಪದೇ ನೆನಪಾಗುವವರು ಪಿ.ರಾಜೇಶ್.ಯಾವಾಗಲೂ ತಲೆಯ ಕೂದಲಿಗೆ ಎಣ್ಣೆ ಹಚ್ಚಿ ಬಾಚಿರುತ್ತಿದ್ದರು.ಹಾಗಾಗಿ ನಾನು ಅವರಿಗೆ ಕರೆಯುತ್ತಿದ್ದ ಹೆಸರು"ಆಯಿಲ್ ರಾಜೇಶ್".ಬದುಕು ಎಷ್ಟೊಂದು ಆಶ್ಚರ್ಯ ಕೆಲವೊಮ್ಮೆ ! ಅವರ ತಂದೆ ಮಲ್ಲೇಶ್ವರದ ಸಂಪಿಗೆ ರಸ್ತೆಯಲ್ಲಿ "ಆರ್ ಆರ್ ಫುಟ್ ವೇರ್" (ರಾಜೇಶ್- ರಮೇಶ್)ಎಂಬ ಬೂಟಿನ ಅಂಗಡಿ ಇಟ್ಟು ಕೊಂಡಿದ್ದರು.ಅಂದ ಹಾಗೆ ರಾಜೇಶ್ ಅವರ ಚಿಕ್ಕಪ್ಪ ಅಂದರೆ ತಾಯಿಯ ತಂಗಿಯ ಯಜಮಾನರು ಬೆಂಗಳೂರು ಭೂಗತ ಲೋಕದ ಡಾನ್ ಆಗಿದ್ದ "ಬೂಟ್ ಹೌಸ್ ಆಯಿಲ್ ಕುಮಾರ್".ನನಗೆ ಅದು ಗೊತ್ತಿಲ್ಲದೆ ನಾನು ಅವರನ್ನು"ಆಯಿಲ್ ರಾಜೇಶ್" ಎಂದು ನಾಮಕರಣ ಮಾಡಿದ್ದೆ.ಆದರೆ ಪಿ.ರಾಜೇಶ್ ಉತ್ತಮ ವ್ಯಕ್ತಿ.ನನ್ನ ಕಾಲೇಜು ವ್ಯಾಸಂಗದಲ್ಲಿ ಜಂಟಿ ಅಭ್ಯಾಸದಲ್ಲಿ ಬಹಳವಾಗಿ ಸಹಾಯ ಮಾಡಿದ ವ್ಯಕ್ತಿ.ಮುಂದೆ ಒಳ್ಳೆಯ ವಾಣಿಜ್ಯ ಉಪನ್ಯಾಸಕರಾಗಿ ಹೆಸರುವಾಸಿಯಾದರು.ಆನಂತರ ಸರಕಾರಿ ಹಣಕಾಸು ಸಂಸ್ಥೆಯಲ್ಲಿ ಕೆಲಸ ಮಾಡುತ್ತಾರೆ.
ಬೂಟ್ ಹೌಸ್ ಆಯಿಲ್ ಕುಮಾರ್ 1988 - 1990 ಅವಧಿಯಲ್ಲಿ ಬೆಂಗಳೂರಿನ ಡಾನ್. ಆಗಿದ್ದವರು.ಕೊತ್ವಾಲ್ ರಾಮಚಂದ್ರ ಜಯರಾಜ್ ಅವರ ಸಾಮ್ರಾಜ್ಯದ ಕಾಲ ಅದಾಗಿತ್ತು.ಅಲ್ಲಿ ಅಧಿಪತ್ಯ ಸಾಧಿಸಿದ ಬೂಟ್ ಹೌಸ್ ಆಯಿಲ್ ಕುಮಾರ್ ಉತ್ತಮ ಉದ್ಯಮಿ ಮತ್ತು ಬುದ್ಧಿವಂತರು.ಸ್ಟ್ರಾಟಜಿಸ್ಟ್ ಡಾನ್ ಎಂದೇ ಕರೆಸಿಕೊಂಡ ಅವರು ಡಾನುಗಳ ಭೂಗತ ಲೋಕದಲ್ಲಿ ಅಧಿಪತ್ಯ ಸಾಧಿಸಿದರೂ ಅದು ವ್ಯವಹಾರಗಳಿಗೆ ಮಾತ್ರ ಸೀಮಿತವಾಗಿತ್ತು.ರಕ್ತಪಾತಕ್ಕೆ ಅವರು ಮುಂದಾಗುತ್ತಿರಲಿಲ್ಲ ಅಂತಲೂ ಅವರ ಸಮಕಾಲೀನರು ಹೇಳುತ್ತಾರೆ.ಅಂದಿನ ಗೀತಾಂಜಲಿ ಚಿತ್ರಮಂದಿರದ ಅಂದರೆ ಇಂದಿನ ಬಿಗ್ ಬಜಾರ್ ಸಮೀಪದಲ್ಲೇ ಅವರು ವಾಸವಿದ್ದರು.ಇಂದಿಗೂ ಅವರ ಶ್ರೀಮತಿಯವರು ಅದೇ ಮನೆಯಲ್ಲಿ ವಾಸವಿದ್ದಾರೆ. ಮಲ್ಲೇಶ್ವರದ ಮತ್ತೊಂದು ಭೂಗತ ಲೋಕಕ್ಕೆ ಕೊರಂಗು ಪಕ್ಕದ ಶ್ರೀರಾಂಪುರದ ಶ್ರೀರಾಂಪುರ ಕಿಟ್ಟಿ ಬೆಕ್ಕಿನ ಕಣ್ಣು ರಾಜೇಂದ್ರ ಇನ್ನೂ ಹಲವಾರು ಮಂದಿಯನ್ನು ನಾವೆಲ್ಲಾ ಮುಖತಃ ನೋಡಿರುವುದು ಇನ್ನೂ ಹಾಗೆಯೇ ನೆನಪಿನಲ್ಲಿ ಉಳಿದು ಹೋಗಿದೆ.ಅವರೆಲ್ಲಾ ಗತಿಸಿ ಹೋದವರು !
-CN Ramesh


0 Comments