ಮೂರು ಮಹಾನಗರ ಪಾಲಿಕೆಗಳ ಚುನಾವಣೆಗೆ ಭಾನುವಾರ ಕೂಡ ನಾಮಪತ್ರ ಸಲ್ಲಿಸಲು ಅವಕಾಶ ಕಲ್ಪಿಸಬೇಕು ಹಾಗೂ ಆಟೋ ರಿಕ್ಷಾ ಪ್ರಚಾರದ ನಿರ್ಬಂಧವನ್ನು ಹಿಂಪಡೆಯಬೇಕು ಎಂದು ಕೋರಿ ರಾಜ್ಯ ಮುಖ್ಯ ಚುನಾವಣಾ ಆಯುಕ್ತರಿಗೆ ಆಮ್ ಆದ್ಮಿ ಪಾರ್ಟಿ ಮನವಿ ಮಾಡಿದೆ.
ಬೆಂಗಳೂರಿನ ಚುನಾವಣಾ ಆಯೋಗದ ಕಚೇರಿಗೆ ಭೇಟಿ ನೀಡಿ ಮನವಿ ಪತ್ರ ಸಲ್ಲಿಸಿದ ಎಎಪಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಸಂಚಿತ್ ಸೆಹವಾನಿಯವರು, “ಹುಬ್ಬಳ್ಳಿ-ಧಾರವಾಡ, ಬೆಳಗಾವಿ ಹಾಗೂ ಕಲಬುರ್ಗಿ ಮಹಾನಗರ ಪಾಲಿಕೆ ಚುನಾವಣೆಗೆ ಸ್ಪರ್ಧಿಸಲು ಬಯಸುವ ಅಭ್ಯರ್ಥಿಗಳಿಗೆ ಆಗಸ್ಟ್ 23ರ ತನಕ ನಾಮಪತ್ರ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಆದರೆ ಆಗಸ್ಟ್ 20ರಂದು ಮೊಹರಂ ಹಾಗೂ 22ರಂದು ಭಾನುವಾರ ಪ್ರಯುಕ್ತ ಸರ್ಕಾರಿ ರಜೆ ಇರುವುದರಿಂದ ನಾಮಪತ್ರ ಸಲ್ಲಿಕೆಗೆ ಎರಡು ದಿನಗಳ ಅವಕಾಶ ಮೊಟಕುಗೊಂಡಿದೆ. ಆಮ್ ಆದ್ಮಿ ಪಾರ್ಟಿ ಸೇರಿದಂತೆ ವಿವಿಧ ಪಕ್ಷಗಳ ಅನೇಕ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲು ಬಾಕಿಯಿದ್ದು, ಆಗಸ್ಟ್ 21 ಹಾಗೂ ಆಗಸ್ಟ್ 23ರಂದು ನಾಮಪತ್ರ ಸಲ್ಲಿಸಲು ಅಭ್ಯರ್ಥಿಗಳಿಗೆ ಹಾಗೂ ಸ್ವೀಕರಿಸಲು ಅಧಿಕಾರಿಗಳಿಗೆ ಸಮಯದ ಅಭಾವ ಉಂಟಾಗುವ ಸಾಧ್ಯತೆಯಿದೆ. ಆದ್ದರಿಂದ ಆಗಸ್ಟ್ 22ರ ಭಾನುವಾರ ಕೂಡ ನಾಮಪತ್ರ ಸಲ್ಲಿಕೆಗೆ ಅವಕಾಶ ಮಾಡಿಕೊಡಬೇಕು” ಎಂದು ಮನವಿ ಮಾಡಿದ್ದಾರೆ.
ಕೋವಿಡ್ ನೆಪದಲ್ಲಿ ಆಟೋ ರಿಕ್ಷಾದಲ್ಲಿ ಪ್ರಚಾರ ಮಾಡುವುದಕ್ಕೂ ಚುನಾವಣಾ ಆಯೋಗ ನಿರ್ಬಂಧ ಹೇರಿರುವುದು ಸರಿಯಲ್ಲ. ಶಾಪಿಂಗ್ ಮಾಲ್, ದೇವಸ್ಥಾನ, ಸಾರ್ವಜನಿಕ ಸಾರಿಗೆ, ಮಾರುಕಟ್ಟೆ ಮುಂತಾದವುಗಳಿಗೆ ಇಲ್ಲದ ನಿರ್ಬಂಧ ಆಟೋ ರಿಕ್ಷಾಗಳಲ್ಲಿ ಮಾಡುವ ಪ್ರಚಾರಕ್ಕೇಕೆ? ಆಟೋ ರಿಕ್ಷಾ ಮೂಲಕ ಪ್ರಚಾರ ಮಾಡದೇ ಅಭ್ಯರ್ಥಿಗಳ ಬಗ್ಗೆ ಹೆಚ್ಚು ಮತದಾರರಿಗೆ ತಿಳಿಸಲು ಸಾಧ್ಯವಿಲ್ಲ. ಆಟೋ ಮೂಲಕ ಪ್ರಚಾರ ಮಾಡುವುದು ಕಡಿಮೆ ಖರ್ಚಿನ ಹಾಗೂ ಪರಿಣಾಮಕಾರಿ ಪ್ರಚಾರ ವಿಧಾನವಾಗಿದ್ದು, ನ್ಯಾಯಯುತವಾಗಿ ಚುನಾವಣೆ ಎದುರಿಸುವ ಅಭ್ಯರ್ಥಿ ಹಾಗೂ ಪಕ್ಷಗಳಿಗೆ ಇದು ಅವಶ್ಯಕವಾಗಿದೆ. ಆದ್ದರಿಂದ ಚುನಾವಣಾ ನೀತಿ ಸಂಹಿತೆಗೆ ತಕ್ಷಣವೇ ತಿದ್ದುಪಡಿ ತಂದು, ರಿಕ್ಷಾದಲ್ಲಿ ಪ್ರಚಾರ ಮಾಡುವುದಕ್ಕೆ ಅನುವು ಮಾಡಿಕೊಡಬೇಕು ಎಂದು ಆಮ್ ಆದ್ಮಿ ಪಾರ್ಟಿ ಮನವಿ ಮಾಡಿದೆ.
ಆಮ್ ಆದ್ಮಿ ಪಾರ್ಟಿಯ ಕಚೇರಿ ಕಾರ್ಯದರ್ಶಿ ವೀಣಾ ಸೆರ್ರಾವ್, ಹಿರಿಯ ಮುಖಂಡರಾದ ವಿ.ಗೋಪಾಲ್ರವರು ಜೊತೆಗಿದ್ದರು.
0 Comments