ಅಭಿಮಾನಿಗಳಿಗೆ ಮೂರು ಪುಟಗಳ ಪತ್ರ ಬರೆದು ರಾಜಕೀಯ ರಂಗ ಪ್ರವೇಶಿಸುತ್ತಿಲ್ಲ ಎಂದು ಘೋಷಿಸಿದ್ದ ಸೂಪರ್ ಸ್ಟಾರ್ ರಜನಿಕಾಂತ್ ಇಂದು ಮಹತ್ವ ಘೋಷಣೆ ಮಾಡಿದ್ದಾರೆ. ರಜನಿ ಮಕ್ಕಳ್ ಮಂಡ್ರಮ್ ಸಂಘಟನೆ ರಾಜಕೀಯ ಚಟುವಟಿಕೆಗಳನ್ನು ಬಂದ್ ಮಾಡಲಿದ್ದು, ಅಭಿಮಾನಿಗಳ ಸಂಘವಾಗಿ ಮಾತ್ರ ಉಳಿಯಲಿದೆ ಎಂದು ರಜನಿ ಹೇಳಿದ್ದಾರೆ.
ರಾಜ್ಯದ ಹಿತದೃಷ್ಟಿಯಿಂದ ರಾಜಕೀಯ ರಂಗದಲ್ಲಿ ರಜನಿ ಅಗತ್ಯ ಹೆಚ್ಚಿದೆ ಎಂದು ಅಭಿಮಾನಿಗಳು ಆಗ್ರಹಪೂರ್ವಕ ಮನವಿ ಮಾಡಿದ್ದರು. ಆದರೆ, ರಾಜಕೀಯ ಪ್ರವೇಶ ಹಾಗೂ ರಾಜಕೀಯ ಪಕ್ಷ ಸ್ಥಾಪನೆ ಬಗ್ಗೆ ಮತ್ತೆ ಯೋಚಿಸುವುದಿಲ್ಲ ಎಂದು ರಜನಿ ಘೋಷಿಸಿದ್ದಾರೆ.
ರಜನಿ ಅವರ ಮೂತ್ರಪಿಂಡದಲ್ಲಿ ಸಮಸ್ಯೆ ಇರುವುದರಿಂದ ಅವರು ಹೆಚ್ಚು ಓಡಾಡುವುದು ಸೂಕ್ತವಲ್ಲ ಮತ್ತು ಕೋವಿಡ್ನಿಂದ ತೀವ್ರ ಅಪಾಯವಾಗಬಹುದು ಎಂದು ವೈದ್ಯರು ಸಲಹೆ ನೀಡಿದ್ದರು. ಇತ್ತೀಚೆಗೆ ಅಮೆರಿಕಕ್ಕೆ ತೆರಳಿ ಚಿಕಿತ್ಸೆ ಪಡೆದು ಚೆನ್ನೈಗೆ ಹಿಂತಿರುಗಿದ್ದಾರೆ.
ಕಳೆದ ವಿಧಾನಸಭೆ ಚುನಾವಣೆಗೂ ಮುನ್ನವೇ ರಜನಿ ರಾಜಕೀಯದಿಂದ ಹೆಜ್ಜೆ ಹಿಂದಕ್ಕೆ ಇಟ್ಟಿದ್ದು, ಯಾರಿಗೂ ಲಾಭವೂ ಆಗಲಿಲ್ಲ, ನಷ್ಟವೂ ಆಗಲಿಲ್ಲ. ರಜನಿ ಸದ್ಯಕ್ಕೆ ಸೂಪರ್ ಸ್ಟಾರ್ ಆಗಿ ಸಿನಿಮಾ ರಂಗಕ್ಕೆ ಸೀಮಿತವಾಗಿರಲಿದ್ದಾರೆ.

0 Comments