"ನವೆಂಬರ್ನಿಂದ ಮುಂದಿನ ಸಂಕ್ರಾಂತಿ ನಡುವೆ ರಾಷ್ಟ್ರಮಟ್ಟದಲ್ಲಿ ದೊಡ್ಡ ರಾಜಕೀಯ ಅವಘಡ ಸಂಭವಿಸಲಿದೆ. ಅದು ಜಾಗತಿಕವಾಗಿ ತಲ್ಲಣ ಸೃಷ್ಟಿಸಲಿದೆ,” ಎಂದು ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.
ಉತ್ತರ ಕನ್ನಡ ಜಿಲ್ಲೆ ಶಿರಸಿ ತಾಲೂಕಿನ ಈಚಲು ಬೆಟ್ಟದಲ್ಲಿ ಭೂದೇವಿ ದೇವಸ್ಥಾನದ ಪೂಜೆಯಲ್ಲಿ ಪಾಲ್ಗೊಂಡ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಮುಂದೆ ಹೆಚ್ಚು ಮಳೆಯಾಗಲಿದ್ದು, ಜಲಪ್ರಳಯ ಉಂಟಾಗಲಿದೆ,” ಎಂದು ಕೂಡ ಹೇಳಿದ್ದಾರೆ.
"ಈ ಸಂವತ್ಸರದಲ್ಲಿ ಪ್ರೇತ ಕಾಣೆಯಾಗುತ್ತಾನೆ, ಪಂಚಭೂತಗಳಿಂದ ತೊಂದರೆ ಆಗಲಿದೆ. ಆಗಸ್ಟ್ ಮೂರನೇ ವಾರದಿಂದ ರೋಗ- ರುಜಿನಗಳು ಹೆಚ್ಚಾಗಲಿದೆ. ಜನವರಿಯವರೆಗೂ ರೋಗ ಬಾಧೆ ಇರಲಿದೆ. ಜನ ಭೀತಿಯಿಂದ ಸಾಯುತ್ತಿದ್ದಾರೆ ಹೊರತು, ಕಾಯಿಲೆಯಿಂದ ಸಾಯುವುದಿಲ್ಲ,” ಎಂದಿದ್ದಾರೆ.
ಇನ್ನು ರಾಜ್ಯದಲ್ಲಿ ಸದ್ಯ ಎದ್ದಿರುವ ರಾಜಕೀಯ ವಿಪ್ಲವ ಸುಖಾಂತ್ಯ ಕಾಣಲಿದೆ ಎಂದ ಕೋಡಿಮಠದ ಶ್ರೀ, "ಬೇಟೆಗಾರನೊಬ್ಬನಿಂದ ತಪ್ಪಿಸಿಕೊಂಡ ಜಿಂಕೆ ಸನ್ಯಾಸಿಯೊಬ್ಬನ ಎದುರು ಹಾದು ಓಡಿಹೋಗಿತ್ತು. ಜಿಂಕೆಯ ಬಗ್ಗೆ ಸನ್ಯಾಸಿಯಲ್ಲಿ ಬೇಟೆಗಾರ ಕೇಳಿದಾಗ ಸನ್ಯಾಸಿ ದ್ವಂದ್ವದಲ್ಲಿ ಸಿಲುಕಿದ್ದರು. ಜಿಂಕೆ ಓಡಿಹೋದ ದಿಕ್ಕು ಹೇಳಿದರೆ ಅದರ ಸಾವಿಗೆ ಕಾರಣವಾದಂತಾಗುತ್ತದೆ, ಹೇಳದಿದ್ದರೆ ಸುಳ್ಳು ನುಡಿದಂತಾಗುತ್ತದೆ ಎಂಬ ಸಂಕಟ ಸನ್ಯಾಸಿಗಿತ್ತು.”
"ಇದೇ ವಿಚಾರ ರಾಜಕೀಯದ ಬಗ್ಗೆ ಹೇಳಲು ತೊಡಕಾಗುತ್ತದೆ. ಆದರೆ ಸದ್ಯವೇ ಈ ಸ್ಥಿತಿ ಸುಖಾಂತ್ಯ ಕಾಣಲಿದೆ. ಯಾವ ರೀತಿಯ ಸುಖಾಂತ್ಯ ಎಂದು ಹೇಳಲು ಸಾಧ್ಯವಿಲ್ಲ,” ಎಂದಿದ್ದಾರೆ.

0 Comments