ಮುಂಬೈ: ಅನಿಲ್ ದೇಶ್ ಮುಖ್ ಅವರ ನಾಗ್ಪುರ ನಿವಾಸದ ಮೇಲೆ ಶುಕ್ರವಾರ ಇಡಿ ದಾಳಿ ನಡೆಸಿತ್ತು. ನಂತರ ಮುಂಬೈನಲ್ಲಿ ಈ ಇಬ್ಬರು ಆಪ್ತರನ್ನು ಸುಮಾರು ಒಂಬತ್ತು ಗಂಟೆಗಳ ಕಾಲ ಇಡಿ ವಿಚಾರಣೆಗೆ ಒಳಪಡಿಸಿತ್ತು. ವಿಚಾರಣೆಯ ವೇಳೆ ಸಹಕಾರ ತೋರದ ಕಾರಣ ಇಬ್ಬರನ್ನು ಬಂಧಿಸಲಾಗಿದೆ ಎಂದು ವರದಿ ತಿಳಿಸಿದೆ. ಮಹಾರಾಷ್ಟ್ರ ಮಾಜಿ ಗೃಹ ಸಚಿವ ಅನಿಲ್ ದೇಶ್ ಮುಖ್ ಅವರ ಆಪ್ತರಿಬ್ಬರನ್ನು ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯವು ಬಂಧಿಸಿದೆ.
ಅನಿಲ್ ದೇಶ್ ಮುಖ್ ಅವರ ವೈಯಕ್ತಿಕ ಕಾರ್ಯದರ್ಶಿ ಸಂಜೀವ್ ಪಾಲಂಡೆ ಮತ್ತು ಸಹಾಯಕ ಕುಂದನ್ ಶಿಂಧೆ ಅವರನ್ನು ಜಾರಿ ನಿರ್ದೇಶನಾಲಯ (ಇಡಿ) ಬಂಧನಕ್ಕೊಳಪಡಿಸಿದೆ. ಈ ವರ್ಷದ ಮಾರ್ಚ್ನಲ್ಲಿ ಆಗ ಗೃಹ ಸಚಿವರಾಗಿದ್ದ ಅನಿಲ್ ದೇಶ್ ಮುಖ್ ವಿರುದ್ಧ ಮುಂಬೈನ ಮಾಜಿ ಪೊಲೀಸ್ ಆಯುಕ್ತ ಪರಂಬೀರ್ ಸಿಂಗ್ ಅವರು ಭ್ರಷ್ಟಾಚಾರದ ಆರೋಪಗಳನ್ನು ನಡೆಸಿದ್ದರು.
ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ಬರೆದ ಪತ್ರದಲ್ಲಿ ಪರಂಬೀರ್ ಸಿಂಗ್, ಅನಿಲ್ ದೇಶ್ ಮುಖ್ ವಿರುದ್ಧ ಭ್ರಷ್ಟಾಚಾರದ ಆರೋಪ ಹೊರಿಸಿದ್ದರು. ಅದಲ್ಲದೆ ದೇಶ್ ಮುಖ್ ಅವರು ಬಾಂಬೆ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ದೇಶ್ ಮುಖ್ ಅವರು ಮಾಜಿ ಸಹಾಯಕ ಇನ್ಸ್ಪೆಕ್ಟರ್ ಸಚಿನ್ ವಾಜೆ ಅವರಿಗೆ ತಿಂಗಳಿಗೆ ಸುಮಾರು 100 ಕೋಟಿ ರೂ.ಗಳನ್ನು ಸುಲಿಗೆ ಮಾಡುವಂತೆ ಗುರಿ ನೀಡಿದ್ದರು. ಬಾರ್ ಮತ್ತು ರೆಸ್ಟೋರೆಂಟ್ಗಳನ್ನು ಗುರಿಯಾಗಿಸಿಕೊಂಡು ಹೆಚ್ಚಿನ ಹಣ ಸಂಗ್ರಹ ಮಾಡಬೇಕು ಎಂದು ದೇಶ್ ಮುಖ್ ಸೂಚಿಸಿದ್ದರು ಎಂದು ಆರೋಪಿಸಿದ್ದರು.

0 Comments