‘ಪ್ರಧಾನಮಂತ್ರಿ ಹುದ್ದೆಗೆ ನೀವು ತಕ್ಷಣವೇ ರಾಜೀನಾಮೆ ನೀಡಿ ‘ರಾಷ್ಟ್ರೀಯ ಸರ್ಕಾರ’ ರಚನೆಗೆ ದಾರಿ ಮಾಡಿಕೊಡಬೇಕು’ ಎಂದು ಪ್ರಧಾನಿ ನರೇಂದ್ರ ಮೋದಿಯವರಿಗೆ ‘ಸಿಟಿಜನ್ ಫಾರ್ ಡೆಮಾಕ್ರಸಿ’ ಪತ್ರ ಬರೆದಿದೆ.
ಸಿಟಿಜನ್ ಫಾರ್ ಡೆಮಾಕ್ರಸಿಯ ಅಧ್ಯಕ್ಷರೂ ಆಗಿರುವ ಎಸ್.ಆರ್.ಹಿರೇಮಠ, ಸಾಹಿತಿ ದೇವನೂರು ಮಹಾದೇವ ಸೇರಿ 24 ಜನ ಈ ಪತ್ರಕ್ಕೆ ಸಹಿ ಮಾಡಿದ್ದಾರೆ.
‘ನಿಮ್ಮ ಸರ್ಕಾರ ಸ್ವತಂತ್ರ ಭಾರತ ಕಂಡ ಅತ್ಯಂತ ಕೆಟ್ಟ ಸರ್ಕಾರವಾಗಿದೆ. ಆದ್ದರಿಂದ ಈಗಿನ ಕೋವಿಡ್-19 ಸಮಸ್ಯೆ, ಸಾಮಾಜಿಕ ಆರ್ಥಿಕ ಮತ್ತು ಆಡಳಿತ ಬಿಕ್ಕಟ್ಟನ್ನು ಸರಿಪಡಿಸಲು ಸಮಾಜದ ಎಲ್ಲ ವರ್ಗಗಳನ್ನು ಒಳಗೊಂಡ ರಾಜಕೀಯ ದೃಷ್ಟಿಕೋನವುಳ್ಳ ಜನರ ಸರ್ಕಾರ ರಚನೆ ಆಗಬೇಕು. ಅದರಿಂದ ಮಾತ್ರ ದೇಶದ ಎಲ್ಲ ಸಮಸ್ಯೆಗಳಿಗೂ ಪರಿಹಾರ’ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
‘ಮೊದಲಿಗೆ ನೀವು ರಾಜೀನಾಮೆ ನೀಡಬೇಕು. ಆ ಬಳಿಕ ರಾಷ್ಟ್ರಪತಿಯವರು ವರ್ಚುವಲ್ ಆಗಿ ಸಂಸತ್ ಅಧಿವೇಶನ ಕರೆಯಬೇಕು. ಆ ಮೂಲಕ ರಾಷ್ಟ್ರೀಯ ಸರ್ಕಾರ ರಚನೆಗೆ ದಾರಿ ಮಾಡಿಕೊಡಬೇಕು. ಇದರಿಂದ ಮಾತ್ರ ರಾಷ್ಟ್ರಕ್ಕೆ ಮುಂದೆ ಬರಬಹುದಾದ ಬಿಕ್ಕಟ್ಟನ್ನು ಎದುರಿಸಲು ಸಾಧ್ಯ. ಅಷ್ಟೇ ಅಲ್ಲ ಮೂರನೇ ಕೋವಿಡ್ ಅಲೆಯನ್ನು ತಡೆಯುವುದರ ಜತೆಗೆ, ರಾಜಕೀಯ ಸುಧಾರಣೆಗಳನ್ನು ತರಲು ರಾಷ್ಟ್ರೀಯ ಸರ್ಕಾರದಿಂದ ಮಾತ್ರ ಸಾಧ್ಯ’ ಎಂದು ಪ್ರತಿಪಾದಿಸಿದ್ದಾರೆ.
ಬ್ರ್ಯಾಂಡ್ ಮೋದಿ ಆಮ್ಲಜನಕವಿಲ್ಲದೆ ಐಸಿಯುನಲ್ಲಿದೆ. ಆದ್ದರಿಂದ ರಾಜೀನಾಮೆ ಕೊಟ್ಟು ಹೊರಹೋಗಬೇಕು. ದೇಶಕ್ಕೆ ರಾಷ್ಟ್ರೀಯ ಸರ್ಕಾರವೊಂದೇ ಪರಿಹಾರ. ಈ ವಿಷಯವಾಗಿ ಇದೇ 26 ರಂದು ರಾಷ್ಟ್ರೀಯ ಮಟ್ಟದ ವೆಬಿನಾರ್ವೊಂದನ್ನು ಏರ್ಪಡಿಸಲಾಗಿದೆ ಎಂದೂ ಪತ್ರದಲ್ಲಿ ಹೇಳಿದ್ದಾರೆ.

0 Comments