Ticker

6/recent/ticker-posts

Ad Code

Responsive Advertisement

ನದಿ ಮೂಲದಿಂದ ನೀರೊದಗಿಸುವ ಜಲ ಜೀವನ್ ಮಿಷನ್ 2 ವರ್ಷದಲ್ಲಿ ಪೂರ್ಣ-ಡಿಸಿಎಂ ಡಾ.ಸಿ.ಎನ್. ಅಶ್ವಥ್ ನಾರಾಯಣ

 

ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಜಲಜೀವನ್ ಮಿಷನ್ ಅಧಿಕಾರಿಗಳು ಹಾಗೂ ರಾಜ್ಯ ಗ್ರಾಮೀಣಾಭಿವೃದ್ಧಿ ಇಲಾಖೆ ಅಧಿಕಾರಿಗಳ ಜೊತೆಗೂಡಿ ಯೋಜನೆಯ ಪ್ರಗತಿ ಪರಿಶೀಲನೆ ನಡೆಸಿದ ಡಿಸಿಎಂ ಡಾ.ಅಶ್ವಥ್ ನಾರಾಯಣ, ಜಿಲ್ಲೆಗೆ ಯೋಜನೆ ಅಡಿಯಲ್ಲಿ ಪೂರೈಸಬಹುದಾದಷ್ಟು ನದಿ ಜಲ ಸಂಪತ್ತು ಲಭ್ಯವಿದೆ ಎಂಬ ಅಂಶವನ್ನು ಸಭೆಯಲ್ಲಿ ಕೇಂದ್ರದ ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಟ್ಟರು.

"ನದಿ ಮೂಲದಿಂದ ಮನೆ ಮನೆಗೆ ನೀರೊದಗಿಸುವ ಜಲ ಜೀವನ್ ಮಿಷನ್ ಯೋಜನೆ ಇನ್ನು ಎರಡು ವರ್ಷಗಳಲ್ಲಿ ಅನುಷ್ಠಾನವಾಗಲಿದ್ದು, ಯೋಜನೆಗೆ ಅಗತ್ಯ ಇರುವ ಜಲ ಮೂಲಗಳು ರಾಮನಗರ ಜಿಲ್ಲೆಯಲ್ಲಿವೆ. ಜಲಜೀವನ್ ಮಿಷನ್ ಯೋಜನೆಯಿಂದ ರಾಮನಗರ ಜಿಲ್ಲೆಯ ನಾಲ್ಕು ತಾಲ್ಲೂಕುಗಳ 127 ಗ್ರಾಮ ಪಂಚಾಯಿತಿಗಳ 850 ಗ್ರಾಮಗಳಿಗೆ ನೀರೊದಗಿಸಲಾಗುತ್ತದೆ. ಇದರಿಂದ 2,08,544 ಮನೆಗಳ 8,85,520 ಜನರಿಗೆ ಶುದ್ಧ ಕುಡಿಯುವ ನೀರು ಸಿಗಲಿದೆ. ಯೋಜನೆ ಅನುಷ್ಠಾನಕ್ಕೆ 675 ಕೋಟಿ ರೂ. ಬೇಕಾಗಿದೆ," ಎಂದು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಡಿಸಿಎಂ ಡಾ.ಸಿ.ಎನ್. ಅಶ್ವಥ್ ನಾರಾಯಣ ಕೇಂದ್ರದ ಅಧಿಕಾರಿಗಳಿಗೆ ಮಾಹಿತಿ ನೀಡಿದರು. 

"ಹದಿನೈದು ದಿನಗಳ ಒಳಗಾಗಿ ಯೋಜನಾ ಸಮೀಕ್ಷಾ ವರದಿಯನ್ನು ಸಲ್ಲಿಸಲು ಸೂಚಿಸಲಾಗಿದೆ. ಮೂರು ತಿಂಗಳಲ್ಲಿ ಸಮಗ್ರ ಯೋಜನಾ ವರದಿ (ಡಿಪಿಆರ್) ಸಲ್ಲಿಸುವಂತೆ ಸೂಚಿಸಲಾಗಿದೆ. ಇನ್ನು ಒಂದೂವರೆ ವರ್ಷದೊಳಗೆ ಈ ಯೋಜನೆಯನ್ನು ಪೂರ್ಣಗೊಳಿಸುವ ಉದ್ದೇಶ ಇದೆ," ಎಂದು ಡಾ. ಅಶ್ವಥ್ ನಾರಾಯಣ ಹೇಳಿದರು.

"ಈ ಯೋಜನೆಗೆ ಅಗತ್ಯವಾದ ಜಲಮೂಲವು ನದಿಗಳಿಂದ ಸಿಗುವ ಬಗ್ಗೆ ಕೆಲ ಪ್ರಶ್ನೆಗಳನ್ನು ಜಲಮಿಷನ್ ಅಧಿಕಾರಿಗಳು ಎತ್ತಿದ್ದರು. ಆ ಎಲ್ಲ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡಲಾಗಿದ್ದು, ನೀರಿನ ಲಭ್ಯತೆಯ ಬಗ್ಗೆ ವಿವರಣೆ ನೀಡಲಾಗಿದೆ," ಎಂದು ಡಿಸಿಎಂ ಹೇಳಿದರು.

"ಮುಖ್ಯವಾಗಿ ರಾಮನಗರ ಮತ್ತು ಮಾಗಡಿ ತಾಲೂಕುಗಳು, ಕನಕಪುರ ತಾಲೂಕಿನ ದೊಡ್ಡ ಮರಳವಾಡಿ ವ್ಯಾಪ್ತಿಯಲ್ಲಿ ಯೋಜನೆ ಕಾರ್ಯಗತವಾಗುತ್ತಿದೆ. ಜಿಲ್ಲೆಯ 2,08,544 ಮನೆಗಳ ಬಳಿಕ ಉಳಿಯುವ ಚನ್ನಪಟ್ಟಣ ತಾಲೂಕಿನ 12,764 ರಾಮನಗರ ತಾಲೂಕಿನ 91,984 ಮನೆಗಳಿಗೆ ನೀರೊದಿಗಿಸುವ ಯೋಜನೆಯನ್ನು ಈ ವರ್ಷವೇ ’ಏಕ ಕಣಿವೆ ಯೋಜನೆ’ ಅಡಿಯಲ್ಲಿ ಕೈಗೆತ್ತಿಕೊಳ್ಳಲಾಗುವುದು," ಎಂದು ಅವರು ಮಾಹಿತಿ ನೀಡಿದರು.

ಸಭೆಯಲ್ಲಿ ಕೇಂದ್ರದ ಅಧಿಕಾರಿಗಳ ತಂಡ ಜೊತೆಗೆ ಗ್ರಾಮೀಣಾಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ ಎಲ್.ಕೆ.ಅತೀಕ್, ಉಪ ಮುಖ್ಯಮಂತ್ರಿಯವರ ಕಾರ್ಯದರ್ಶಿ ಪಿ.ಪ್ರದೀಪ, ರಾಮನಗರ ಜಿಲ್ಲಾ ಪಂಚಾಯಿತಿ ಸಿಇಒ ಇಕ್ರಂ ಸೇರಿದಂತೆ ಇಲಾಖೆಯ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

Post a Comment

0 Comments

Ad Code

Responsive Advertisement