ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಪಶ್ಚಿಮ ವಲಯ(ಗೋವಿಂದರಾಜ ನಗರ ವಿಧಾನಸಭಾ ಕ್ಷೇತ್ರ ಹೊರತುಪಡಿಸಿ) ವ್ಯಾಪ್ತಿಯಲ್ಲಿ ಕೋವಿಡ್ ಸೋಂಕನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುವ ಹಾಗೂ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುವ ನಿಟ್ಟಿನಲ್ಲಿ ಮಾನ್ಯ ಉಪಮುಖ್ಯ ಮಂತ್ರಿಗಳು ಹಾಗೂ ಪಶ್ಚಿಮ ವಲಯ ಕೋವಿಡ್ ಉಸ್ತುವಾರಿ ಸಚಿವರು ಡಾ. ಸಿ.ಎನ್.ಅಶ್ವತ್ಥನಾರಾಯಣ ರವರು ಇಂದು ವಲಯದ ಎಲ್ಲಾ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಸಭೆ ನಡೆಸಿದರು.
ಸಭೆಯಲ್ಲಿ ಮಾನ್ಯ ಸಚಿವಾರಾದ ಶ್ರೀ ಕೆ.ಗೋಪಾಲಯ್ಯ, ಶಾಸಕರುಗಳಾದ ಶ್ರೀ ದಿನೇಶ್ ಗುಂಡೂರಾವ್, ಶ್ರೀ ಜಮೀರ್ ಅಹ್ಮದ್ ಖಾನ್, ಮುಖ್ಯ ಆಯುಕ್ತರು ಶ್ರೀ ಗೌರವ್ ಗುಪ್ತ, ವಲಯ ಸಂಯೋಜಕರು ಶ್ರೀ ಉಜ್ವಲ್ ಗೋಶ್, ವಲಯ ಆಯುಕ್ತರು ಶ್ರೀ ಬಸವರಾಜು, ಜಂಟಿ ಆಯುಕ್ತರು ಶ್ರೀ ಶಿವಸ್ವಾಮಿ, ಆರೋಗ್ಯಾಧಿಕಾರಿ ಡಾ.ಮನೋರಂಜನ್ ಹೆಗ್ಡೆ ಹಾಗೂ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.
ಬಿಬಿಎಂಪಿ ಪಶ್ಚಿಮ ವಲಯದಲ್ಲಿ ಕೋವಿಡ್ ಸೋಂಕನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುವ ಸಲುವಾಗಿ ತೆಗೆದುಕೊಳ್ಳಬೇಕಿರುವ ಮುಂಜಾಗ್ರತಾ ಕ್ರಮಗಳಾದ ಸೋಂಕು ಲಕ್ಷಣಗಳಿರುವವರು ತ್ವರಿತವಾಗಿ ಟೆಸ್ಟ್ ಮಾಡಿಸಿಕೊಳ್ಳುವ, ಐಲೋಲೇಷನ್ ನಲ್ಲಿರುವವರಿಗೆ ಮೆಡಿಕಲ್ ಕಿಟ್ ನೀಡುವ, ತಡವಾಗಿ ಸ್ವಾಬ್ ಫಲಿತಾಂಶ ನೀಡುವ ಲ್ಯಾಬ್ಗಳಿಗೆ 24 ಗಂಟೆಯೊಳಗಾಗಿ ಫಲಿತಾಂಶ ನೀಡಲು ಸೂಚಿಸುವ, ಕೋವಿಡ್ ಆರೈಕೆ ಕೇಂದ್ರಗಳಲ್ಲಿ ಆಕ್ಸಿಜನ್ ಹಾಸಿಗೆಗಳನ್ನು ವ್ಯವಸ್ಥೆಗಳನ್ನು ಮಾಡುವ, ಸಹಾಯವಾಣಿ ಸಂಖ್ಯೆಯನ್ನು ಸದೃಢಗೊಳಿಸುವುದು ಸೇರಿದಂತೆ ಆರೋಗ್ಯ ವ್ಯವಸ್ಥೆಯನ್ನು ಸರಿಪಡಿಸಿಕೊಂಡು ಪರಿಣಾಮಕಾರಿಯಾಗಿ ಕೆಲಸ ಮಾಡಲು ಅಧಿಕಾರಿಗಳಿಗೆ ಉಪ ಮುಖ್ಯಮಂತ್ರಿಗಳು ಸೂಚನೆ ನೀಡಿದರು.
ನಗರದಲ್ಲಿ ಹಾಸಿಗೆ ಲಭ್ಯತೆ, ಆಂಬ್ಯುಲೆನ್ಸ್, ಶವ ಸಾಗಾಣೆ ವಾಹನ, ಐಸೋಲೇಟ್ನಲ್ಲಿರುವವರ ಮೇಲೆ ನಿಗಾವಹಿಸುವುದು ಸೇರಿದಂತೆ ಸಹಾಯವಾಣಿ ಸಂಖ್ಯೆ ಮೂಲಕ ನಡೆಯುವ ಕಾರ್ಯಚಟುವಟಿಕೆಗಳು ಸರಿಯಾಗಿ ನಡೆಯಬೇಕು. ಬೂತ್ ಮಟ್ಟದ ಅಧಿಕಾರಿಗಳು, ಕಂದಾಯ ಅಧಿಕಾರಿಗಳು ಹಾಗೂ ಇನ್ನಿತರೆ ಸಿಬ್ಬಂದಿ ಸಂಪರ್ಕಿತರನ್ನು ಪತ್ತೆ ಪತ್ತೆಹಚ್ಚುವ ಕಾರ್ಯವನ್ನು ಚುರುಕುಗೊಳಿಸಬೇಕು. ಪಶ್ಚಿಮ ವಲಯದಲ್ಲಿ ಕೋವಿಡ್ ಸೋಂಕು ನಿಯಂತ್ರಿಸಲು ಕೂಡಲೆ ಎಲ್ಲಾ ಅಧಿಕಾರಿಗಳು ಅಗತ್ಯ ಕ್ರಮಗಳನ್ನು ಕೈಗೊಂಡು ಸೋಂಕು ತಡೆಯಬೇಕು ಎಂದು ತಿಳಿಸಿದರು.
ಆಸ್ಪತ್ರೆಗಳಲ್ಲಿ ಅವಶ್ಯಕ ಔಷಧಿಗಳು ಸಂಗ್ರಹಿಸಿಟ್ಟುಕೊಂಡಿರಬೇಕು. ಕೋವಿಡ್ ಸೋಂಕಿತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಟ್ರಾನ್ಸಿಟ್ ಸೆಂಟರ್ಗಳನ್ನು ಮಾಡಲು ಕ್ರಮವಹಿಸಬೇಕು. ಆಕ್ಸಿಜನ್, ರೆಮಿಡೆಸ್ವಿರ್ ತ್ವರಿತವಾಗಿ ಸಿಗುವಂತೆ ವ್ಯಸಸ್ಥೆ ಮಾಡಿಕೊಳ್ಳಬೇಕು. ಖಾಸಗಿ ಆಸ್ಪತ್ರೆಗಳಿಗೆ ಭೇಟಿ ನೀಡಿ ಹಾಸಿಗೆ ನೀಡದಿದ್ದರೆ ಕೂಡಲೆ ಹಾಸಿಗೆ ವಶಪಡಿಸಿಕೊಳ್ಳಬೇಕು. ಸೋಂಕು ದೃಢಪಟ್ಟು ಐಸೋಲೇಟ್ ಆಗಿರುವವರಿಗೆ ಮೆಡಿಕಲ್ ಕಿಟ್ ಕೊಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

0 Comments