ಕರ್ನಾಟಕದಲ್ಲಿ ರಾಜ್ಯ ಸರ್ಕಾರ ವೀಕೆಂಡ್ ಕರ್ಫ್ಯೂ ಜಾರಿಗೆ ತಂದಿದ್ದು, ನಿನ್ನೆಯ ಕರ್ಫ್ಯೂ ಬಹುತೇಕ ಯಶಸ್ವಿಯಾಗಿದೆ. ವೀಕೆಂಡ್ನಲ್ಲಿ ಬೆಳಗ್ಗೆ 6ರಿಂದ 10 ಗಂಟೆಯವರೆಗೆ ಮಾತ್ರ ದಿನಸಿ, ತರಕಾರಿ, ಹೂವು-ಹಣ್ಣುಗಳ ಅಂಗಡಿ ತೆರೆಯಲು ಅವಕಾಶ ನೀಡಲಾಗಿತ್ತು. ಉಳಿದಂತೆ ಮೆಡಿಕಲ್ ಶಾಪ್ಗಳಿಗೆ ಮಾತ್ರ ದಿನವಿಡೀ ತೆರೆಯಲು ಅವಕಾಶ ನೀಡಲಾಗಿತ್ತು. ನಿನ್ನೆಯ ವೀಕೆಂಡ್ ಕರ್ಫ್ಯೂ ಯಶಸ್ವಿಯಾಗಿದ್ದು, ರಸ್ತೆಗಳೆಲ್ಲ ಜನರಿಲ್ಲದೆ ಬಿಕೋ ಎನ್ನುತ್ತಿದ್ದವು. ಇಂದು ಮುಂಜಾನೆಯಿಂದ ಜನರು ತರಕಾರಿ- ಹಾಲು, ದಿನಸಿ ಕೊಳ್ಳಲು ಓಡಾಡುತ್ತಿದ್ದಾರೆ. ಬೆಳಗ್ಗೆ 10 ಗಂಟೆಯ ಬಳಿಕ ಎಲ್ಲ ಅಂಗಡಿಗಳೂ ಬಂದ್ ಆಗಲಿವೆ.
ಸದ್ಯಕ್ಕೆ ಮೇ 4ರವರೆಗೆ ವೀಕೆಂಡ್ ಕರ್ಫ್ಯೂ ನಿಯಮಗಳನ್ನು ಜಾರಿಗೆ ತರಲಾಗಿದೆ. ಆದರೆ, ನಾಳೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ಸಚಿವ ಸಂಪುಟ ಸಭೆ ನಡೆಯಲಿದ್ದು, ಕರ್ಫ್ಯೂ ಮುಂದುವರಿಸುವ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆಯಿದೆ. ಈ ಬಗ್ಗೆ ನಾಳೆ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ ಕೈಗೊಳ್ಳುವ ಸಾಧ್ಯತೆಯಿದೆ. ಲಾಕ್ಡೌನ್ ಮಾಡಿದರೆ ಕರ್ನಾಟಕ ಸಂಪೂರ್ಣ ಸ್ತಬ್ಧವಾಗಲಿದ್ದು, ಲಾಕ್ಡೌನ್ನಿಂದ ಆರ್ಥಿಕ ಚಟುವಟಿಕೆಗಳು ಸ್ಥಗಿತಗೊಳ್ಳಲಿವೆ. ಇದರಿಂದ ರಾಜ್ಯದ ವರಮಾನಕ್ಕೂ ದೊಡ್ಡ ಪೆಟ್ಟು ಬೀಳಲಿದೆ.
ಲಾಕ್ಡೌನ್ ಬದಲು ಕರ್ಫ್ಯೂ ಮಾಡಿದರೆ ಕೆಲವು ವಾಣಿಜ್ಯ ವಹಿವಾಟುಗಳಿಗೆ, ಕೈಗಾರಿಕೆಗಳಿಗೂ ಅವಕಾಶ ನೀಡಬಹುದು. ಹೀಗಾಗಿ ಕರ್ಫ್ಯೂ ಮುಂದುವರಿಸಿದರೆ ಚೈನ್ ಲಿಂಕ್ ಕಟ್ ಮಾಡಬಹುದು. ಜನರ ಅನಗತ್ಯ ಓಡಾಟಕ್ಕೆ ಬ್ರೇಕ್ ಹಾಕಬಹುದು. ಕೋವಿಡ್ ನಿಯಂತ್ರಣಕ್ಕೆ ಕರ್ಫ್ಯೂ ಒಂದೇ ಮಾರ್ಗ. ಹೀಗಾಗಿ ವೀಕೆಂಡ್ ಕರ್ಫ್ಯೂ ವಿಸ್ತರಣೆಗೆ ಸರ್ಕಾರ ಚಿಂತನೆ ನಡೆಸಿತ್ತು.
ಕರ್ಫ್ಯೂ ಇದ್ದರೂ ಬೆಂಗಳೂರಿನ ಯಶವಂತಪುರದಲ್ಲಿ ಮಟನ್ ಮಾರ್ಕೆಟ್ ಓಪನ್ ಆಗಿತ್ತು. ಮಾಂಸ, ಮೀನು ಖರೀದಿಗೆ ಆಗಮಿಸುತ್ತಿದ್ದಾರೆ. ತರಕಾರಿ ಖರೀದಿಗಿಂತ ಮಾಂಸ ಖರೀದಿಗೆ ಹೆಚ್ಚು ಜನ ಸೇರಿದ್ದಾರೆ. ಇನ್ನು, ಸ್ಯಾಟಲೈಟ್ ಬಸ್ ನಿಲ್ದಾಣ ಫುಲ್ ಖಾಲಿಯಾಗಿದ್ದು, ಶೇ 10ರಷ್ಟು ಪ್ರಯಾಣಿಕರು ಮಾತ್ರ ಸ್ಯಾಟಲೈಟ್ ನಿಲ್ದಾಣದಿಂದ ಪ್ರಯಾಣ ಮಾಡುತ್ತಿದ್ದಾರೆ. ಮೆಜೆಸ್ಟಿಕ್ ಬಸ್ ನಿಲ್ದಾಣ ಕೂಡ ಖಾಲಿಯಾಗಿದೆ. ಜನರಿಲ್ಲದ ಕಾರಣ ಬಸ್ ಓಡಾಟವೂ ಕಡಿಮೆಯಾಗಿದೆ.
ಕರ್ನಾಟಕದಲ್ಲಿ ಕೊರೋನಾ ಅಟ್ಟಹಾಸ ಮಿತಿ ಮೀರಿದ್ದು, ರಾಜ್ಯದಲ್ಲಿ ಹಿಂದಿನ ಎಲ್ಲ ದಾಖಲೆಯನ್ನು ಮುರಿದು ಕೊರೊನಾ ಕೇಸ್ ಅಟ್ಟಹಾಸ ಮೆರೆದಿದೆ.ನಿನ್ನೆ ಒಂದೇ ದಿನ ಕರ್ನಾಟಕದಲ್ಲಿ 30 ಸಾವಿರ ಸಮೀಪಿಸಿದ ಕೊರೊನಾ ಕೇಸ್ ಇನ್ನಷ್ಟು ಆತಂಕ ಮೂಡಿಸಿದೆ. ಕರ್ನಾಟಕದಲ್ಲಿ ನಿನ್ನೆ 29,438 ಪ್ರಕರಣಗಳು ಪತ್ತೆಯಾಗಿದ್ದು, ಒಂದೇ ದಿನ ಬರೋಬ್ಬರಿ 208 ಜನ ಕೊರೋನಾದಿಂದ ಸಾವನ್ನಪ್ಪಿದ್ದಾರೆ. ಬೆಂಗಳೂರೊಂದರಲ್ಲೇ 17 ಸಾವಿರಕ್ಕೂ ಹೆಚ್ಚು ಜನರಿಗೆ ಕೊರೊನಾ ತಗುಲಿದೆ. ಬೆಂಗಳೂರಿನಲ್ಲಿ ನಿನ್ನೆ 17,342 ಕೇಸ್ ಪತ್ತೆಯಾಗಿದೆ, ಬರೋಬ್ಬರಿ 149 ಮಂದಿ ಸಾವನ್ನಪ್ಪಿದ್ದಾರೆ.

0 Comments