ಹೊಸ ಹಣಕಾಸು ವರ್ಷ 2021-22 ಆರಂಭವಾಗುತ್ತಿದ್ದಂತೆ ನಾವು ಖರ್ಚು ಮಾಡುವ ಹಣದಲ್ಲಿ ಕೆಲವು ಬದಲಾವಣೆಗಳು ಆಗುವಂತೆ ಕೇಂದ್ರ ಸರ್ಕಾರ ಕೆಲವೊಂದು ನಿಯಮಗಳನ್ನು ತಂದಿದೆ.
ಪಿಎಫ್ ಬಡ್ಡಿದರ ಮೇಲೆ ತೆರಿಗೆ: 2021ರ ಕೇಂದ್ರ ಬಜೆಟ್ ನಲ್ಲಿ ಘೋಷಿಸಿರುವಂತೆ ನೌಕರರ ಭವಿಷ್ಯ ನಿಧಿ(ಇಪಿಎಫ್) ಮತ್ತು ಸ್ವಯಂಪ್ರೇರಿತ ಭವಿಷ್ಯ ನಿಧಿ(ವಿಪಿಎಫ್) ನಲ್ಲಿ ಉದ್ಯೋಗಿಯೊಬ್ಬ ಇಟ್ಟ ಠೇವಣಿ ಹಣಕಾಸು ವರ್ಷದಲ್ಲಿ ಎರಡೂವರೆ ಲಕ್ಷ ರೂಪಾಯಿ ದಾಟಿದರೆ ಅದರ ಮೇಲಿನ ಬಡ್ಡಿದರ ಮೇಲೆ ತೆರಿಗೆ ವಿಧಿಸಲಾಗುತ್ತದೆ.
ಇದಲ್ಲದೆ, ಉದ್ಯೋಗದಾತರಿಂದ ಇಪಿಎಫ್ ಖಾತೆಗೆ ಯಾವುದೇ ಕೊಡುಗೆ ಇಲ್ಲದಿದ್ದರೆ (ಸಾಮಾನ್ಯವಾಗಿ ಸರ್ಕಾರಿ ನೌಕರರ ವಿಷಯದಲ್ಲಿ), ಆಗ ಹಣಕಾಸು ವರ್ಷದಲ್ಲಿ 5 ಲಕ್ಷ ರೂಪಾಯಿವರೆಗಿನ ಠೇವಣಿಗಳಿಗೆ ಬಡ್ಡಿ ಮೇಲೆ ತೆರಿಗೆ ವಿನಾಯಿತಿ ನೀಡಲಾಗುತ್ತದೆ. ಹೀಗಾಗಿ, ಹೊಸ ಹಣಕಾಸು ವರ್ಷದಲ್ಲಿ ಪಿಎಫ್ ಬಡ್ಡಿ ಮೇಲಿನ ತೆರಿಗೆಯನ್ನು ತಪ್ಪಿಸಲು, ನಿಮ್ಮ ಇಪಿಎಫ್ ಖಾತೆಯಲ್ಲಿನ ಠೇವಣಿಗಳು ಮೇಲೆ ತಿಳಿಸಿದ ಮಿತಿಗಳನ್ನು ಮೀರದಂತೆ ನೋಡಿಕೊಳ್ಳಿ.
ಪರಿಷ್ಕೃತ ಐಟಿಆರ್ ಸಲ್ಲಿಕೆಗೆ ಸಮಯ ಮಿತಿಯಲ್ಲಿ ಇಳಿಕೆ: ಮತ್ತೊಂದು ಬಜೆಟ್ 2021 ರ ಪ್ರಕಟಣೆಯೆಂದರೆ, ತಡವಾಗಿ ಮತ್ತು ಪರಿಷ್ಕೃತ ಆದಾಯ ತೆರಿಗೆ ರಿಟರ್ನ್ (ಐಟಿಆರ್) ಅನ್ನು ಸಲ್ಲಿಸಲು ಅನುಮತಿಸಿದ ಸಮಯವನ್ನು ಮೂರು ತಿಂಗಳವರೆಗೆ ಕಡಿತಗೊಳಿಸಲಾಗಿದೆ. ಹೊಸ ನಿಯಮವು ಹಣಕಾಸು ವರ್ಷ 2021ಕ್ಕೆ ಆದಾಯ ತೆರಿಗೆ ರಿಟರ್ನ್ (ಐಟಿಆರ್) ಸಲ್ಲಿಸಲು ಅನ್ವಯವಾಗುತ್ತದೆ. ಹಿಂದಿನ ನಿಯಮದ ಪ್ರಕಾರ, ಹಣಕಾಸು ವರ್ಷ -21 ಕ್ಕೆ ಐಟಿಆರ್ ಸಲ್ಲಿಸುವ ಗಡುವನ್ನು ನೀವು ತಪ್ಪಿಸಿದ್ದರೆ, 2022 ರ ಮಾರ್ಚ್ 31 ರವರೆಗೆ, ವಿಳಂಬವಾದ ಐಟಿಆರ್ ಅನ್ನು ಸಲ್ಲಿಸಲು ನಿಮಗೆ ಸಮಯವಿತ್ತು, ಗರಿಷ್ಠ 10 ಸಾವಿರ ರೂಪಾಯಿಯವರೆಗೆ ದಂಡ ಪಾವತಿಸಿ ಐಟಿಆರ್ ಸಲ್ಲಿಕೆ ಮಾಡಬಹುದು. ಆದಾಗ್ಯೂ, ಸಮಯ-ಮಿತಿಯನ್ನು ಕಡಿಮೆ ಗೊಳಿಸುವುದರೊಂದಿಗೆ ಈಗ ನೀವು ಡಿಸೆಂಬರ್ 31, 2021 ರವರೆಗೆ ವಿಳಂಬವಾದ ಐಟಿಆರ್ ಅನ್ನು ಸಲ್ಲಿಸಲು ಸಮಯ ಹೊಂದಿರುತ್ತೀರಿ. ಆದ್ದರಿಂದ ಅದನ್ನು ಸಲ್ಲಿಸಲು ಮೂರು ತಿಂಗಳು ಕಡಿಮೆ ಇರುತ್ತದೆ. ಅಲ್ಲದೆ, ವಿಳಂಬವಾದ ಐಟಿಆರ್ ಸಲ್ಲಿಸಲು ವಿಧಿಸಲಾಗುವ ದಂಡವನ್ನು ಸರ್ಕಾರ ತಿಳಿಸಿದೆ. ಗಡುವು ಮುಗಿದ ನಂತರ (ಸಾಮಾನ್ಯವಾಗಿ, ಜುಲೈ 31, 2020) 2021 ರ ಡಿಸೆಂಬರ್ 31 ರಂದು ಅಥವಾ ಅದಕ್ಕೂ ಮೊದಲು ಐಟಿಆರ್ ಸಲ್ಲಿಸಿದ್ದರೆ, ನಂತರ ಸಲ್ಲಿಕೆ ಮಾಡುವವರು 5 ಸಾವಿರ ರೂಪಾಯಿ ದಂಡ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಲಾಭಾಂಶ ಆದಾಯದ ಮೇಲೆ ಮುಂಗಡ ತೆರಿಗೆ ದಂಡವಿಲ್ಲ: ಮುಂಗಡ ತೆರಿಗೆ ಕಂತಿನಲ್ಲಿ ಕೊರತೆ ಅಥವಾ ಲಾಭಾಂಶದ ಆದಾಯದಿಂದಾಗಿ ಸಮಯಕ್ಕೆ ಸರಿಯಾಗಿ ಪಾವತಿಸಲು ಸಾಧ್ಯವಾಗದಿದ್ದರೆ, ಕೆಲವು ಷರತ್ತುಗಳಿಗೆ ಒಳಪಟ್ಟು ಯಾವುದೇ ದಂಡ ಬಡ್ಡಿಯನ್ನು ವಿಧಿಸಲಾಗುವುದಿಲ್ಲ.

0 Comments