Ticker

6/recent/ticker-posts

Ad Code

Responsive Advertisement

ವಿಧಾನಸಭೆ ಕೋಲಾಹಲ ಸೃಷ್ಟಿಸಿದ ‘ಒಂದು ರಾಷ್ಟ್ರ ಒಂದು ಚುನಾವಣೆ’

 ಬೆಂಗಳೂರು, ಮಾ.4- ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ `ಒಂದು ರಾಷ್ಟ್ರ ಒಂದು ಚುನಾವಣೆ' ಕುರಿತ ವಿಶೇಷವಾದ ಚರ್ಚೆಗೆ ವಿರೋಧ ಪಕ್ಷಗಳು ವಿರೋಧ ವ್ಯಕ್ತಪಡಿಸಿದ್ದರಿಂದ ವಿಧಾನಸಭೆಯಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಭಾರೀ ಕೋಲಾಹಲ ಸೃಷ್ಟಿಸಿತು. ಕಲಾಪ ಆರಂಭವಾಗುತ್ತಿದ್ದಂತೆ ಸಭಾಧ್ಯಕ್ಷ ಕಾಗೇರಿ ಒಂದು ರಾಷ್ಟ್ರ ಒಂದು ಚುನಾವಣೆ ಕುರಿತ ವಿಶೇಷ ಚರ್ಚೆ ಕೈಗೆತ್ತಿಕೊಳ್ಳಲು ಮುಂದಾದರು.

ಆಗ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು ಈ ವಿಷಯವನ್ನು ಸಂವಿಧಾನದ ಯಾವ ನಿಯಮಗಳಡಿ ಚರ್ಚೆ ಕೈಗೆತ್ತಿಕೊಂಡಿದ್ದೀರಿ. ಕಳೆದ ಬಾರಿ ಸದನ ಸಲಹಾ ಸಮಿತಿಯಲ್ಲೇ ಚರ್ಚೆ ನಡೆಸುವುದಾಗಿ ಹೇಳಿದ್ದೀರಿ. ಆದರೆ, ಸಮಯಾವಕಾಶವಿಲ್ಲದ ಕಾರಣ ಈಗ ಕೈಗೆತ್ತಿಕೊಂಡಿದ್ದೀರಿ. ಯಾವ ನಿಯಮಗಳಡಿ ಈ ನಿರ್ಣಯ ತೆಗೆದುಕೊಂಡಿದ್ದೀರಿ. ಸಂವಿಧಾನದಲ್ಲಿ ಇದಕ್ಕೆ ಆವಕಾಶವಿದೆಯೇ, ಕಳೆದ ಆವೇಶನದ ಸಂದರ್ಭದಲ್ಲಿ ಹೇಳಿದ್ದಿರಾದರೂ ನಾವು ಯಾವುದೇ ಅಭಿಪ್ರಾಯ ವ್ಯಕ್ತಪಡಿಸಿರಲಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.

ಸಭಾಧ್ಯಕ್ಷ ಕಾಗೇರಿ ಅವರು ಸಂವಿಧಾನದ 363ನೆ ನಿಯಮದಡಿ ನನಗಿರುವ ವಿಶೇಷ ಅಕಾರ ಬಳಸಿಕೊಂಡು ಚರ್ಚೆ ಕೈಗೆತ್ತಿಕೊಂಡಿದ್ದೇವೆ. ಹಿಂದೆ ಸಂವಿಧಾನ ಕುರಿತ ಚರ್ಚೆಗೆ ಯಾವ ನಿಯಮ ಬಳಸಲಾಗಿತ್ತೋ ಅದೇ ನಿಯಮದಡಿ ತೆಗೆದುಕೊಂಡಿದ್ದೇವೆ. ಈಗ ವಿಷಯ ಪ್ರಸ್ತಾಪಿಸುತ್ತೇನೆ ಎಂದರು.

ಆಗ ಸಿದ್ದರಾಮಯ್ಯನವರು ನೀವು ಮನಸೋ ಇಚ್ಛೆ ಚರ್ಚೆ ನಡೆಸಲು ಅವಕಾಶವಿಲ್ಲ. ನಿಯಮಗಳ ಪ್ರಕಾರ ನಡೆಯಬೇಕು. ಮೊದಲು ಚರ್ಚೆಯನ್ನು ಯಾವ ಕಾರ್ಯ-ಕಲಾಪಗಳ ಪಟ್ಟಿಯಲ್ಲಿ ಸೇರಿಸಿದ್ದೀರಿ. ಅದಕ್ಕೆ ಅವಕಾಶವಿದೆಯೇ, ಸದನವನ್ನು ನಿಯಮಗಳ ಪ್ರಕಾರ ನಡೆಸಬೇಕು. ನಿಮಗೆ ವಿಷಯ ಪ್ರಸ್ತಾಪಿಸಲು ಅವಕಾಶವಿಲ್ಲ ಎಂದು ಹೇಳಿದರು. ಆಗ ಸಚಿವ ಮಾಧುಸ್ವಾಮಿ ಅವರು ಸಭಾಧ್ಯಕ್ಷರು ವಿಷಯ ಪ್ರಸ್ತಾಪಿಸಲು ಅವಕಾಶವಿಲ್ಲವೆಂದ ಮೇಲೆ ತಾವು ಯಾವ ರೀತಿ ಚರ್ಚೆ ಮಾಡುತ್ತೀರಿ ಎಂದು ಪ್ರಶ್ನಿಸಿದರು.

ಈ ಹಂತದಲ್ಲಿ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರು ಸಭಾಧ್ಯಕ್ಷರು ವಿಶೇಷ ಸಂದರ್ಭಗಳಲ್ಲಿ ಮಾತ್ರ ನಿಯಮ ಬಳಸಬೇಕು. ನನಗೆ ವಿಶೇಷ ಅಕಾರವಿದೆ ಎಂದು ಮನಸೋ ಇಚ್ಛೆ ನಡೆಯಲು ಕಾನೂನಿನಲ್ಲಿ ಅವಕಾಶವಿಲ್ಲ. ನಿಮಗೆ ವಿಶೇಷ ಅಕಾರವಿದೆ ಎಂದರೆ ನಾಳೆ ಬಿಡಿಎ ಆಯುಕ್ತ ನನಗೆ ವಿಶೇಷ ಅಕಾರವಿದೆ ಎಂದು ನಿವೇಶನಗಳನ್ನು ಹಂಚಿದರೆ ಏನಾಗುತ್ತದೆಯೋ ಇಲ್ಲಿ ಅದೇ ಆಗುತ್ತದೆ ಎಂದು ಸಭಾಧ್ಯಕ್ಷರಿಗೆ ಬಿಸಿ ಮುಟ್ಟಿಸಿದರು.

ಮೊನ್ನೆ ಕುಸಿಯುತ್ತಿರುವ ಸಂವಿಧಾನ ಮೌಲ್ಯಗಳ ಕುರಿತ ಚಿಂತನ-ಮಂಥನ ನಡೆಸಿದಿರಿ. ಯಾರಾದರೂ ಮುಖಕೊಟ್ಟು ಮಾತನಾಡಲು ಅವಕಾಶವಿತ್ತೆ. ಯಾರ್ಯಾರ ಮುಖವಾಡಗಳು ಹೇಗೆ ಎಂಬುದು ಅನಾವರಣಗೊಂಡವು ಎಂದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕಾಗೇರಿ ನೀವು ಹಿರಿಯರು, ಈ ರೀತಿ ಮಾತನಾಡುವುದು ಸರಿಯಲ್ಲ. ನಿಮ್ಮ ಘನತೆಗೆ ತಕ್ಕಂತೆ ಮಾತನಾಡಿ ಎಂದು ತಿರುಗೇಟು ನೀಡಿದರು.

ನನ್ನ ವಿರುದ್ಧ ಸದನದಲ್ಲಿ ಮಾತನಾಡಿದಾಗ ಅಸಂವಿಧಾನಿಕ ಪದಗಳನ್ನು ನೀವು ತೆಗೆದುಹಾಕಲು ಹಿಂದೇಟು ಹಾಕಿದಾಗಲೇ ನನಗೆ ಗೊತ್ತಾಗಿತ್ತು. ಈಗ ನಿಮ್ಮಿಂದ ನಾನು ಘನತೆ-ಗೌರವ ಹೆಚ್ಚಿಸಿಕೊಳ್ಳುವ ಅಗತ್ಯವಿಲ್ಲ. ನನಗೆ ಸದನದಲ್ಲಿ ಹೇಗೆ ನಡೆದುಕೊಳ್ಳಬೇಕೆಂದು ಗೊತ್ತಿದೆ ಎಂದರು.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾತನಾಡಿ, ಸದನ ಸಲಹಾ ಸಮಿತಿಯಲ್ಲಿ ಒಂದೇ ರಾಷ್ಟ್ರ, ಒಂದೇ ಚುನಾವಣೆ ಕುರಿತು ಹಿಂದೆಯೇ ಈ ಬಗ್ಗೆ ಮಾಹಿತಿ ನೀಡಲಾಗಿತ್ತು. ಇಲ್ಲಿ ಸಭಾಧ್ಯಕ್ಷರು ವಿಷಯ ಪ್ರಸ್ತಾಪಿಸುತ್ತಾರೆ. ಅದನ್ನು ಒಪ್ಪುವುದು ಬಿಡುವುದು ನಿಮಗೆ ಬಿಟ್ಟದ್ದು. ಆದರೆ, ಚರ್ಚೆ ಮಾಡಬೇಡಿ ಎನ್ನುವುದು ಸರಿಯಲ್ಲ ಎಂದು ಆಕ್ಷೇಪಿಸಿದರು. ಕಾಂಗ್ರೆಸ್‍ನ ಎಚ್.ಕೆ.ಪಾಟೀಲ್ ಅವರು ಕ್ರಿಯಾಲೋಪ ಎತ್ತಿದರು. ಈ ರೀತಿ ಎಲ್ಲರೂ ಕ್ರಿಯಾಲೋಪ ಎತ್ತುತ್ತ ಕುಳಿತರೆ, ಆಕ್ಷೇಪಿಸಿದರೆ ವಿಷಯ ಚರ್ಚಿಸಲು ಸಾಧ್ಯವಿಲ್ಲ ಎನ್ನುತ್ತಲೇ ಸಭಾಧ್ಯಕ್ಷ ಕಾಗೇರಿ ಒಂದು ರಾಷ್ಟ್ರ ಒಂದು ಚುನಾವಣೆಯ ಪ್ರಾಸ್ತಾವಿಕ ಭಾಷಣ ಮಾಡಲು ಮುಂದಾದರು.

ಕಾಂಗ್ರೆಸ್ ಸದಸ್ಯರು ಸದನದ ಬಾವಿಗಿಳಿದು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಇದು ಸಂಘ ಪರಿವಾರದ ಅಜೆಂಡಾ. ನಮಗೆ ಆರ್‍ಎಸ್‍ಎಸ್ ಅಜೆಂಡಾ ಬೇಡವೆ ಬೇಡ ಎನ್ನುತ್ತ ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದರು. ಸದಸ್ಯರ ಗದ್ದಲದ ನಡುವೆಯೇ ಸಭಾಧ್ಯಕ್ಷರು ಪ್ರಾಸ್ತಾವಿಕ ಭಾಷಣ ಚರ್ಚೆ ಪ್ರಸ್ತಾಪಿಸಿದರು.


Post a Comment

0 Comments

Ad Code

Responsive Advertisement