Ticker

6/recent/ticker-posts

Ad Code

Responsive Advertisement

ತಿರುಪತಿಗೆ ಭೇಟಿ ನೀಡುವ ಭಕ್ತರಿಗೆ ಟಿಟಿಡಿ ಹಲವು ನಿರ್ಬಂಧ

 ಹೈದರಾಬಾದ್: ಕೋವಿಡ್ ಎರಡನೇ ಅಲೆ ಶುರುವಾಗುತ್ತಿದ್ದಂತೆ ತಿರುಮಲ ತಿರುಪತಿ ದೇವಸ್ಥಾನದಲ್ಲಿ ಭಕ್ತರ ಪ್ರವೇಶಕ್ಕೆ ನಿರ್ಬಂಧಗಳನ್ನು ವಿಧಿಸಲಾಗಿದೆ.


'ಸರ್ವದರ್ಶನ'ದ ದೈನಂದಿನ ಟೋಕನ್‌ಗಳ ವಿತರಣೆಯನ್ನು 22 ಸಾವಿರದಿಂದ 15 ಸಾವಿರಕ್ಕೆ ಇಳಿಸಲಾಗುತ್ತಿದೆ. ಪರಿಸ್ಥಿತಿಗೆ ಅನುಗುಣವಾಗಿ ಆನ್‌ಲೈನ್ ವಿಶೇಷ ದರ್ಶನ ಟಿಕೆಟ್‌ಗಳನ್ನೂ (₹ 300) ಕಡಿತಗೊಳಿಸಲಾಗುವುದು ಎಂದು ಟಿಟಿಡಿ ಪ್ರಕಟಿಸಿದೆ.

ದೇಶದಲ್ಲಿ ನಿತ್ಯವೂ 50 ಸಾವಿರಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗುತ್ತಿವೆ. ಆಂಧ್ರಪ್ರದೇಶದಲ್ಲಿ ನಿತ್ಯವೂ ಒಂದು ಸಾವಿರ ಕೋವಿಡ್ ಪ್ರಕರಣಗಳು ವರದಿಯಾಗುತ್ತಿವೆ. ತಿರುಪತಿ, ಶ್ರೀಕಾಳಹಸ್ತಿ, ಕನಿಪಕ್ಕಂ ಧಾರ್ಮಿಕ ಕ್ಷೇತ್ರಗಳು ಇರುವ ಚಿತ್ತೂರ್ ಜಿಲ್ಲೆಯಲ್ಲಿ ಅತಿ ಹೆಚ್ಚಿನ ಕೋವಿಡ್ ಪ್ರಕರಣಗಳು ವರದಿಯಾಗುತ್ತಿವೆ.

'ತಿರುಪತಿಗೆ ಭೇಟಿ ನೀಡುವ ಭಕ್ತರಿಗೆ ಟಿಟಿಡಿ ಹಲವು ನಿರ್ಬಂಧಗಳನ್ನು ವಿಧಿಸಿದೆ. ವೈಕುಂಠ ಸರದಿ ಕಾಂಪ್ಲೆಕ್ಸ್‌, ಶ್ರೀವಾರಿ ದೇವಸ್ಥಾನ, ಅನ್ನ ಪ್ರಸಾದಂ ಕಟ್ಟಡ, ಕಲ್ಯಾಣಕಟ್ಟಡಗಳಲ್ಲಿ ಭಕ್ತರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಮತ್ತು ತಿರುಮಲದ ಸಾರ್ವಜನಿಕ ಪ್ರದೇಶಗಳಲ್ಲಿ ಕಡ್ಡಾಯವಾಗಿ ಅಂತರ ಕಾಪಾಡಿಕೊಳ್ಳುವಂತೆ ಸೂಚಿಸಲಾಗಿದೆ. ಜ್ವರ, ಶೀತ ಮತ್ತು ಕೆಮ್ಮು ಇರುವಂಥ ಭಕ್ತರು ತಿರುಮಲಕ್ಕೆ ಭೇಟಿ ನೀಡದಂತೆ ನಿರ್ಬಂಧ ವಿಧಿಸಲಾಗಿದೆ' ಎಂದು ಟಿಟಿಡಿಯ ಅಧಿಕಾರಿಯೊಬ್ಬರು ಬುಧವಾರ ಮಾಹಿತಿ ನೀಡಿದ್ದಾರೆ.



ಮಂಗಳವಾರದ ತನಕ ವೆಂಕಟೇಶ್ವರ ದೇವಸ್ಥಾನಕ್ಕೆ ಸುಮಾರು 50 ಸಾವಿರ ಭಕ್ತರು ಭೇಟಿ ನೀಡಿದ್ದಾರೆ. ಜೂನ್‌ನಲ್ಲಿ ದೇವಸ್ಥಾನ ಪುನರಾರಂಭಗೊಂಡಾಗ 6 ಸಾವಿರ ಭಕ್ತರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು. ಕೋವಿಡ್‌ಗೂ ಮುನ್ನ ನಿತ್ಯವೂ 75 ಸಾವಿರ ಭಕ್ತರು ತಿರುಪತಿಗೆ ಭೇಟಿ ನೀಡುತ್ತಿದ್ದರು.


Post a Comment

0 Comments

Ad Code

Responsive Advertisement