ಬೆಂಗಳೂರು ಮತ್ತು ಒಕ್ಕಲಿಗ ಸಮುದಾಯದಲ್ಲಿ ಹಿಡಿತ ಸಾಧಿಸಬೇಕು ಎನ್ನುವ ಕಾರಣಕ್ಕೆ ಮಾಜಿ ಉಪ ಮುಖ್ಯಮಂತ್ರಿ ಹಾಗೂ ಸಚಿವ ಆರ್. ಅಶೋಕ್ ಹಾಗೂ ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವಥನಾರಾಯಣ ನಡುವೆ ನಡೆಯುತ್ತಿದ್ದ ಮುಸುಕಿನ ಗುದ್ದಾಟ ಮತ್ತೆ ಮುನ್ನಲೆಗೆ ಬಂದಿದೆ. 'ಭೂ ಮಾಫಿಯಾವನ್ನು ನಿಯಂತ್ರಣ ಮಾಡಲು ಸಾಧ್ಯವಿಲ್ಲ. ‌ಅಕ್ರಮದಲ್ಲಿ ತೊಡಗಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡರೆ ಅವರು ಮತ್ತೆ ಅದೇ ಸ್ಥಾನದಲ್ಲಿ ಬಂದು ಕೂರುತ್ತಾರೆ' ಎಂಬ ಆರ್. ಅಶೋಕ್ ಹೇಳಿಕೆಗೆ ಅಶ್ವಥನಾರಾಯಣ್ ತಿರುಗೇಟು ನೀಡಿದ್ದಾರೆ.


ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವಥನಾರಾಯಣ, 'ಯಾರೂ ಕೂಡ ಅಸಹಾಯಕರಾಗಿ ಕೆಲಸ ಮಾಡುವ ಪ್ರಶ್ನೆ ಇಲ್ಲ.‌‌ ಭೂ ಮಾಫಿಯಾ ವಿರುದ್ಧ ಸರ್ಕಾರದ ಕ್ರಮ ತೆಗೆದುಕೊಂಡಿದೆ. ಭೂಗಳ್ಳರ ವಿರುದ್ಧ ಸರ್ಕಾರ ಕಾನೂನು ಕ್ರಮ ಕೈಗೊಂಡಿದೆ.‌ ನಮ್ಮ ಸರ್ಕಾರದಲ್ಲಿ ಇದಕ್ಕೆಲ್ಲ ಅವಕಾಶ ಇಲ್ಲ. ನಾವು ತೀವ್ರ ಪರಿಣಾಮಕಾರಿಯಾಗಿ ಭೂಗಳ್ಳರ ವಿರುದ್ಧ ಕ್ರಮ ವಹಿಸುತ್ತೇವೆ' ಎಂದು ಆರ್. ಅಶೋಕ್ ಅವರ ಮಾತುಗಳಿಗೆ ವ್ಯತಿರಿಕ್ತವಾದ ಅಭಿಪ್ರಾಯ ವ್ಯಕ್ತಪಡಿಸುವ ಮೂಲಕ ಟಾಂಗ್ ನೀಡಿದರು.
ಇದೇ ವೇಳೆ 'ಅಶ್ವಥನಾರಾಯಣ್ ಮುಖ್ಯಮಂತ್ರಿಯಾಗಲಿ' ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ.ವಿ. ಸದಾನಂದಗೌಡ ಹೇಳಿಕೆಗೆ ಪ್ರತಿಕ್ರಿಯಿಸಿದ ಡಿಸಿಎಂ ಅಶ್ವಥನಾರಾಯಣ, 'ತಾನು ಪ್ರತಿನಿಧಿಸುವ ಬೆಂಗಳೂರಿನ ಮಲ್ಲೇಶ್ವರಂ ಕ್ಷೇತ್ರ ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಕೊಡಲಿ ಎಂದು ಹೇಳಿದ್ದಾರೆ. ಜೊತೆಗೆ ಸದಾನಂದಗೌಡರು ಮಾಮೂಲಿಯಂತೆ ಮಾತನಾಡುತ್ತಾ ಈ ರೀತಿ ಹೇಳಿದ್ದಾರೆ. ಇದರಲ್ಲಿ ವಿಶೇಷ ಏನಿಲ್ಲ' ಎಂದು ಸ್ಪಷ್ಟೀಕರಣ ನೀಡಿದರು.

ಸದ್ಯ ನಾವೆಲ್ಲಾ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ನೇತೃತ್ವದಲ್ಲಿ ಕೆಲಸ ಮಾಡುತ್ತಿದ್ದೇವೆ. ಯಡಿಯೂರಪ್ಪ ಅವರೇ ನಮ್ಮ ನಾಯಕರು. ಅವರ ನಾಯಕತ್ವದಲ್ಲೇ ಮುಂದುವರೆಯುತ್ತೇವೆ. ಯಾವುದೇ ಕಾರಣಕ್ಕೂ ನಾಯಕತ್ವ ಬದಲಾವಣೆ ಇಲ್ಲ‌. ಈ ಬಗ್ಗೆ ನಮ್ಮ ಪಕ್ಷದ ಹೈಕಮಾಂಡ್ ನಾಯಕರು ಕೂಡ ಸ್ಪಷ್ಟಪಡಿಸಿದ್ದಾರೆ. ಹಾಗಾಗಿ ಗೊಂದಲ ಉದ್ಭವ ಆಗುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.ದಿಢೀರನೆ ನವದೆಹಲಿಗೆ ಆಗಮಿಸಿರುವ ಬಗ್ಗೆ ಮಾತನಾಡಿದ ಅವರು ಕೇರಳ‌ ವಿಧಾನಸಭಾ ಚುನಾವಣೆ‌ ಹಿನ್ನೆಲೆಯಲ್ಲಿ ಸಭೆ ನಡೆಯಲಿದೆ. ಸಭೆಯಲ್ಲಿ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಚರ್ಚೆ ನಡೆಸಲಾಗುವುದು. ಅದಕ್ಕಾಗಿ ದೆಹಲಿಗೆ ಬಂದಿದ್ದೇನೆ. ಕೇರಳದಲ್ಲಿ ಬಿಜೆಪಿ ಉತ್ತಮವಾದ ಸಾಧನೆ ಮಾಡುವ ಭರವಸೆ ಇದೆ ಎಂದು ಹೇಳಿದರು.
ಜಾರಕಿಹೊಳಿ‌ ಸಿಡಿ ಪ್ರಕರಣದ ಬಗ್ಗೆ ಮಾತನಾಡಿದ ಅಶ್ವಥನಾರಾಯಣ, ಸಾಮಾನ್ಯವಾಗಿ ಎಸ್​ಐಟಿ ಸತ್ಯಾಂಶ ಹೊರತರುವ ಪ್ರಯತ್ನ ಮಾಡುತ್ತೆ. ಎಸ್ ಐಟಿ ತನಿಖೆ ನಡೆಯುತ್ತಿರುವುದು ಒಳ್ಳೆಯ ಬೆಳವಣಿಗೆ. ಯಾರಿಗೂ ರಕ್ಷಣೆ ಕೊಡದೆ ಸತ್ಯ ಬೆಳಕಿಗೆ ತರುವ ಪ್ರಯತ್ನ ಆಗಲಿ. ತನಿಖೆದೆ ನಡೆದ ಬಳಿಕ ಯಾರ ಕೈವಾಡ ಇದೆ ಅನ್ನೊದು ಸ್ಷಷ್ಟವಾಗಲಿದೆ. ತನಿಖೆಗೂ ಮುನ್ನ ಬೇರೆ ಹೇಳಿಕೆಗಳಿಗೆ ಮಹತ್ವ ಇರುವುದಿಲ್ಲ. ಎಸ್ ಐಟಿ ತನಿಖೆಯಿಂದ ಎಲ್ಲಾ ಸತ್ಯಾಂಶ ಹೊರಬರಲಿದೆ ಎಂದು ಹೇಳಿದರು.