ಗುತ್ತಿಗೆ ಕಾಮಗಾರಿಗಳಲ್ಲಿ ಶೇ. 40ರಷ್ಟು ಅನುದಾನ ಲೂಟಿಯಾಗಿರುವುದರ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದೇ ಈಗ ಮತ್ತೆ 1,500 ಕೋಟಿ ರೂಪಾಯಿ ಬಿಡುಗಡೆ ಮಾಡಿರುವುದಕ್ಕೆ ಆಮ್‌ ಆದ್ಮಿ ಪಾರ್ಟಿ ಆಕ್ರೋಶ ವ್ಯಕ್ತಪಡಿಸಿದೆ.

ಪ್ರೆಸ್‌ಕ್ಲಬ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಎಪಿಯ ಬೆಂಗಳೂರು ನಗರಾಧ್ಯಕ್ಷ ಮೋಹನ್‌ ದಾಸರಿ, “ಕಳೆದ ಐದು ವರ್ಷಗಳಲ್ಲಿ ಬೆಂಗಳೂರಿನ ರಸ್ತೆಗಳ ಅಭಿವೃದ್ಧಿಗಾಗಿ ಸರ್ಕಾರದ ಬೊಕ್ಕಸದಿಂದ 20,000 ಕೋಟಿ ರೂಪಾಯಿ ಬಿಡುಗಡೆಯಾಗಿದೆ. ಆ ಹಣ ಜನಪ್ರತಿನಿಧಿಗಳ ಜೇಬು ಸೇರಿದ್ದರಿಂದ ವಾಹನ ಸವಾರರು ದಿನನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ. ಈಗ ವಿವಿಧ ಕಾಮಗಾರಿಗಳಿಗೆ 1,500 ಕೋಟಿ ರೂಪಾಯಿ ಹಾಗೂ ಅಮೃತ್ ನಗರೋತ್ಥಾನ ಯೋಜನೆಗೆ 6000 ಕೋಟಿ ಹಣ ಬಿಡುಗಡೆ ಮಾಡಲು ಮುಂದಾಗಿರುವುದು ಕೂಡ ಲೂಟಿ ಮಾಡುವ ಪ್ರಯತ್ನಗಳು. ಮುಂಬರುವ ಬಿಬಿಎಂಪಿ ಚುನಾವಣೆಯ ಖರ್ಚಿಗಾಗಿ ಸರ್ಕಾರದ ಹಣವನ್ನು ಈ ಮೂಲಕ ಲೂಟಿ ಮಾಡಲಾಗುತ್ತಿದೆ. ಬೆಂಗಳೂರಿನ ಬಗ್ಗೆ ಸರ್ಕಾರ ಹಾಗೂ ಬಿಬಿಎಂಪಿಗೆ ನಿಜಕ್ಕೂ ಕಾಳಜಿಯಿದ್ದರೆ ಪಾರದರ್ಶಕವಾಗಿ ಕಾಮಗಾರಿಗಳನ್ನು ಜಾರಿಗೆ ತರಲಿ” ಎಂದು ಸವಾಲು ಹಾಕಿದರು.

 “ಗುತ್ತಿಗೆ ಕಾಮಗಾರಿಗಳಲ್ಲಿ ಶೇ. 40ರಷ್ಟು ಅಕ್ರಮವಾಗಿರುವುದರ ಕುರಿತು ನ್ಯಾಯಾಂಗ ತನಿಖೆಗೆ ಆದೇಶಿಸಲು ಸಿಎಂ ಬಸವರಾಜ ಬೊಮ್ಮಾಯಿ ಹೆದರುತ್ತಿದ್ದಾರೆ. ಮುಂದಿನ ಕಾಮಗಾರಿಗಳನ್ನು ನ್ಯಾಯಾಧೀಶರ ವಿವೇಚನೆಯಡಿ ಸಮಿತಿ ರಚಿಸಿ ನಡೆಸುತ್ತೇವೆ ಎಂದು ಸಿಎಂ ಹೇಳಿದ್ದರು. ಆದರೆ ಈ ಸಮಿತಿ ರಚಿಸದೇ ಕಾಮಗಾರಿಗಳನ್ನು ಕೈಗೆತ್ತಿಕೊಂಡಿದ್ದಾರೆ. ಕೆಆರ್‌ಐಡಿಎಲ್‌ಗೆ ಕಾಮಗಾರಿಗಳನ್ನು ವಹಿಸುವ ಉದ್ದೇಶವೇ ಅಕ್ರಮ ಎಸಗುವುದಾಗಿದೆ. ಅನಗತ್ಯವಾಗಿ 4ಜಿ ವಿನಾಯಿತಿಯನ್ನು ಬಳಸಿಕೊಂಡು ಪಾರದರ್ಶಕ ಗುತ್ತಿಗೆಯಿಂದ ತಪ್ಪಿಸಿಕೊಳ್ಳಲು ಹೊರಟಿರುವ ಸರ್ಕಾರಕ್ಕೆ ನಾಚಿಕೆಯಾಗಬೇಕು” ಎಂದು ಮೋಹನ್‌ ದಾಸರಿ ಆಕ್ರೋಶ ವ್ಯಕ್ತಪಡಿಸಿದರು.

ಎಎಪಿಯ ಬೆಂಗಳೂರು ಉಪಾಧ್ಯಕ್ಷರಾದ ಬಿ.ಟಿ.ನಾಗಣ್ಣ ಮಾತನಾಡಿ, “ಸರ್ಕಾರದ ಭ್ರಷ್ಟ ನಡೆಯನ್ನು ನೋಡಿಕೊಂಡು ಆಮ್‌ ಆದ್ಮಿ ಪಾರ್ಟಿ ಸುಮ್ಮನಿರುವ ಪ್ರಶ್ನೆಯೇ ಇಲ್ಲ. ಕಾಮಗಾರಿಗಳ ಪ್ರಗತಿ ಹಾಗೂ ಅನುದಾನ ಬಳಕೆಯ ಮಾಹಿತಿಯನ್ನು ಪ್ರತಿದಿನ ವೆಬ್‌ಸೈಟ್‌ಗೆ ಅಪ್‌ಡೇಟ್‌ ಮಾಡಿ ಸಾರ್ವಜನಿಕರಿಗೆ ತಿಳಿಯುವಂತೆ ಮಾಡಬೇಕು. ಕಾಮಗಾರಿ ಮುಗಿದ ನಂತರ ಸೋಶಿಯಲ್‌ ಆಡಿಟ್‌ ಮಾಡಿ ಭ್ರಷ್ಟಾಚಾರವನ್ನು ಜನರ ಮುಂದೆ ತೆರೆದಿಡಲು ನಿರ್ಧರಿಸಿದ್ದೇವೆ. ಆಡಳಿತದಲ್ಲಿ ಪಾರದರ್ಶಕತೆ ತರಲೆಂದೇ ಹುಟ್ಟಿಕೊಂಡಿರುವ ಪಕ್ಷ ನಮ್ಮದಾಗಿದ್ದು, ಜನರ ಒಂದೊಂದು ರೂಪಾಯಿ ತೆರಿಗೆಯೂ ವ್ಯರ್ಥವಾಗದಂತೆ ಮಾಡಲು ಪ್ರಯತ್ನಿಸುತ್ತೇವೆ. ಹಗಲು ದರೋಡೆ ಮಾಡಲು ಸರ್ಕಾರ ಮಾಡುವ ಪ್ರತಿಯೊಂದು ಕುತಂತ್ರವನ್ನೂ ಜನರು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಚುನಾವಣೆಯಲ್ಲಿ ತಕ್ಕಪಾಠ ಕಲಿಸುವ ವಿಶ್ವಾಸವಿದೆ” ಎಂದು ಹೇಳಿದರು.

ಎಎಪಿಯ ಬೆಂಗಳೂರು ಮಾಧ್ಯಮ ಸಂಯೋಜಕ ವಿಜಯ್‌ ಶಾಸ್ತ್ರಿಮಠ್‌ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.